ಕಾಪು: ಸುಮಾರು 3 ತಿಂಗಳ ಹಿಂದೆ ಇಲ್ಲಿನ ಪಡುಬಿದ್ರಿಯಲ್ಲಿ ನಕಲಿ ಚಿನ್ನದ ಸರ ನೀಡಿ ವಂಚಿಸಿದ ಆರೋಪಿ ಮಹಿಳೆಯೊಬ್ಬಳ‍ನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಜ. 13ರಂದು ಮಧ್ಯಾಹ್ನ ಸುಮಾರು 2:30ರ ವೇಳೆ ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ಬಸ್ಸಮ್ಮ ಎಂಬ ಮಹಿಳೆಗೆ ಅಪರಿಚಿತ ಮಹಿಳೆ ಮತ್ತು ಪುರುಷನೊಬ್ಬ 9 ಲಕ್ಷ್ಮಿ ಪೆಂಡೆಂಟ್ ಹೊಂದಿದ ಸರವನ್ನು ತೋರಿಸಿ, ಅದರಲ್ಲಿ 6 ಪವನ್‌ ಚಿನ್ನವಿದೆ ಎಂದು ಹೇಳಿ, ತುರ್ತು ಹಣದ ಅವಶ್ಯಕತೆ ಇದೆ ಎಂದು ನಂಬಿಸಿದ್ದರು. ಅದನ್ನು ನಂಬಿದ ಬಸ್ಸಮ್ಮ ತಮ್ಮ ಬಳಿ ಇದ್ದ 6 ಸಾವಿರ ರು. ನಗದು ಮತ್ತು ಸುಮಾರು 2 ಪವನ್‌ (1.50 ಲಕ್ಷ ರು. ಮೌಲ್ಯದ) ಬಂಗಾರದ ಆಭರಣಗಳನ್ನು ನೀಡಿ ಆರೋಪಿಗಳಿಂದ ಸರವನ್ನು ಪಡೆದಿದ್ದರು. ಬಳಿಕ ಬಸ್ಸಮ್ಮ ಅವರು ಸರವನ್ನು ಹತ್ತಿರದ ಚಿನ್ನದ ಅಂಗಡಿಗೆ ಹೋಗಿ ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿಯಿತು. ಅಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಬಸ್ಸಮ್ಮ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಳ್ಳಲಾಯಿತು. ಈ ವೇಳೆ ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿ ಬಲ್ಲಾಪುರ ಬುಡುಗನಹಳ್ಳಿ ನಿವಾಸಿ ಕಾವ್ಯ ಹಾಗೂ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ತಾಲೂಕಿನ ವೆಂಕಟೇಶ್ ಆರೋಪಿಗಳೆಂದು ಪತ್ತೆಯಾಯಿತು. ಮಾ. 23ರಂದು ಪಡುಬಿದ್ರಿ ಪೊಲೀಸರು ಕಾವ್ಯಳನ್ನು ಬಂಧಿಸಿ, ಆಕೆಯಿಂದ 7.610 ಗ್ರಾಂ ಚಿನ್ನಾಭರಣ ಹಾಗೂ 6,000 ನಗದನ್ನು ವಶಪಡಿಸಿಕೊಂಡಿದ್ದಾರೆ. ವಂಕಟೇಶ ತಲೆಮರೆಸಿಕೊಂಡಿದ್ದಾನೆ.

ಈ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಸಕ್ತಿವೇಲು ಇ. ಮತ್ತು ಅನಿಲ್ ಕುಮಾರ್ ಟಿ. ನಾಯಕ್, ಎಎಸ್ಐ ರಾಜೇಶ್ ಪಿ., ಗಿರೀಶ್ ಯು.ಆರ್., ಸಿಬ್ಬಂದಿಗಳಾದ ಕೃಷ್ಣಪ್ರಸಾದ್, ಸಂದೇಶ್ ಭಂಡಾರಿ, ರುಕ್ಮಿಣಿ ಹಾಗೂ ಜ್ಯೋತಿ ಭಾಗವಹಿಸಿದ್ದರು.