ಕನ್ನಡಪ್ರಭ ವಾರ್ತೆ ಬೆಂಗಳೂರು

ಕೈ-ಕಾಲು ಕಟ್ಟಿ ಬಾಯಿಗೆ ಟೇಪ್‌ ಸುತ್ತಿ ಪ್ರಿಯಕರನ್ನು ಕೊಂದಿದ್ದ ಮಹಿಳೆಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಊರ್ವಶಿ ಅಲಿಯಾಸ್‌ ಬಿಂದು ಬಂಧಿತ ಆರೋಪಿ. ಈಕೆ ಇತ್ತೀಚೆಗೆ ಹಾಸನ ಮೂಲದ ಪ್ರಿಯಕರನಾದ ಮೋಹನ್‌ ಕೃಷ್ಣ (29) ಎಂಬಾತನನ್ನು ಕೊಲೆಗೈದಿದ್ದಳು. ಪ್ರಾಥಮಿಕ ವಿಚಾರಣೆಯಲ್ಲಿ ಕಿರುಕುಳ ನೀಡುತ್ತಿದ್ದಕ್ಕೆ ಆತನನ್ನು ಹತ್ಯೆ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ.

3 ತಿಂಗಳ ಹಿಂದೆ ಬಾಗಲಗುಂಟೆಯ ವಿಜಯಲಕ್ಷ್ಮೀ ಬಡಾವಣೆಗೆ ಬಂದಿದ್ದ ಮೋಹನ್ ಕೃಷ್ಣ ಮತ್ತು ಬಿಂದು ಗಂಡ-ಹೆಂಡತಿ ಎಂದು ನಟರಾಜ್ ಎನ್ನುವರ 1 ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದು, ಮನೆ ಚಿಕ್ಕದಾಗಿದ್ದರಿಂದ ಅದೇ ಮನೆ ಎದುರುಗಡೆ ಮತ್ತೊಂದು ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಆದರೆ, ಇಬ್ಬರು ಹೆಚ್ಚಾಗಿ ನಟರಾಜ್ ಅವರ ಮನೆಯಲ್ಲೇ ವಾಸವಾಗಿದ್ದರು. ಮನೆ ಬಾಡಿಗೆ ಪಡೆಯುವಾಗ ಸಹ ನಿರ್ದೇಶಕಿ ಎಂದು ಬಿಂದು ಹೇಳಿಕೊಂಡಿದ್ದಳು. ಮೋಹನ್ ಕೃಷ್ಣ ಪಿಗ್ನಿ ಕಲೆಕ್ಟರ್ ಎಂದು ಹೇಳಿಕೊಂಡಿದ್ದ.

ಮೋಹನ್‌ಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದು, ಕೌಟುಂಬಿಕ ಕಾರಣಕ್ಕೆ ಪತ್ನಿಯಿಂದ ದೂರವಾಗಿದ್ದ. ಹಾಗೆಯೇ ಬಿಂದುಗೂ ಮದುವೆಯಾಗಿದ್ದು, ಪತಿಯಿಂದ ದೂರವಾಗಿದ್ದಳು. ಕಳೆದ ವರ್ಷ ಕೆಲ ಸ್ನೇಹಿತರ ಮೂಲಕ ಪರಸ್ಪರ ಇಬ್ಬರ ಪರಿಚಯವಾಗಿತ್ತು.


ಆರೋಪಿ ಬಿಂದು ವಿಚಾರಣೆ ವೇಳೆ ಮೋಹನ್ ಜತೆ ಸಂಬಂಧ ಹೊಂದಿದ್ದೆ. ಆದರೆ, ಆತ ಅನಗತ್ಯವಾಗಿ ನನ್ನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಿರುಕುಳ ನೀಡುತ್ತಿದ್ದ. ಹೀಗಾಗಿ ಕೊಂದಿದ್ದಾಗಿ ಹೇಳಿಕೆ ನೀಡಿದ್ದಾಳೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.