ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಮಹಿಳೆಯರು ಸ್ವಉದ್ಯೋಗ, ಉದ್ಯಮ ಸ್ಥಾಪನೆ ಮೂಲಕ ಅಭಿವೃದ್ಧಿ ಸಾಧಿಸಬೇಕು ಎಂದು ರಾಷ್ಟ್ರೀಯ ಆಹಾರ ತಂತ್ರಜ್ಞಾನ ಮತ್ತು ಉದ್ಯಮ ನಿರ್ವಹಣೆ ಸಂಸ್ಥೆಯ (ಎನ್ಐಎಫ್ಟಿಇಎಂ-ಟಿ) ನಿರ್ದೇಶಕ ಪ್ರೊ.ವಿ.ಪಳನಿಮುತ್ತು ಹೇಳಿದರು.ನಗರದ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿದ್ದ ಮೂರು ದಿನಗಳ ‘ಸ್ವಾವಲಂಬನೆ ಮೇಳ-2024’ದ ಸಮಾರೋಪ ಸಮಾರಂಭದಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕೃಷಿ, ಆಹಾರ, ತೋಟಗಾರಿಕೆ, ಡೈರಿ, ಕರಕುಶಲ ಸೇರಿದಂತೆ ಅನೇಕ ಉದ್ಯಮಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಪ್ರೊತ್ಸಾಹಿಸಲು, ತರಬೇತಿ, ಮಾರ್ಗದರ್ಶನ ಮತ್ತು ಕೌಶಲ್ಯ ನೀಡಲು ಸರ್ಕಾರದ ಹಲವು ಯೋಜನೆಗಳಿವೆ. ಶೇ.100ರಷ್ಟು ಸಹಾಯಧನ ಇರುವ ಯೋಜನೆಗಳೂ ಇವೆ. ಮಹಿಳೆಯರು ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸ್ವಸಹಾಯ ಗುಂಪುಗಳ ಮೂಲಕ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ ಆರಂಭಿಸಬಹುದು.ಇದರಿಂದ ಸ್ವಾವಲಂಬಿ ಜೀವನ ಸಾಧ್ಯವಾಗಲಿದೆ. ಆರ್ಥಿಕ ಸ್ವಾತಂತ್ರ್ಯವು ಸಿಗುತ್ತದೆ. ಜೀವನ ಗುಣಮಟ್ಟ ಸುಧಾರಣೆ ಯಾಗುತ್ತದೆ. ಉತ್ಪನ್ನಗಳಿಗೆ ಉತ್ತಮ ಪ್ಯಾಕೇಜಿಂಗ್ ಮತ್ತು ಮಾರ್ಕೇಟಿಂಗ್ ಕೌಶಲ್ಯ ಅಳವಡಿಸಿಕೊಂಡರೆ ಯಶಸ್ಸು ಖಂಡಿತ ಸಿಗುತ್ತದೆ. ಕೌಶಲ್ಯ ತರಬೇತಿ, ಮಾರ್ಗದರ್ಶನಕ್ಕಾಗಿ ತಂಜಾವೂರಿನಲ್ಲಿ ‘ಎನ್ಐಎಫ್ಟಿಇಎಂ’ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಆನ್ಲೈನ್ ಮೂಲಕವೂ ಮಾರ್ಗದರ್ಶನ ಪಡೆದುಕೊಳ್ಳಬಹುದು ಎಂದವರು ತಿಳಿಸಿದರು.
ಉತ್ತಮ ಸಾಧನೆ ತೋರಿದ ಕಲಬುರಗಿಯ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಲಕ್ಷ್ಮೀ ಸ್ವಸಹಾಯ ಸಂಘಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಉದ್ಯಮಿ ಪದ್ಮಿನಿಗೌಡ, ಅವೇಕ್ ಸಂಸ್ಥೆಯ ಅಧ್ಯಕ್ಷೆ ಆಶಾ ಎನ್.ಆರ್, ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ನ ಡಿಜಿಎಂ ಉಲಗಿಯನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಕೌಶಲ್ಯ ತರಬೇತಿ ಒಪ್ಪಂದ: ಕೃಷಿ ಮತ್ತು ಹಣಕಾಸು ಕ್ಷೇತ್ರದಲ್ಲಿ ರಾಜ್ಯದ ಮಹಿಳಾ ಉದ್ದಿಮೆದಾರರಿಗೆ ತರಬೇತಿ ನೀಡಲು ರಾಷ್ಟ್ರೀಯ ಆಹಾರ ತಂತ್ರಜ್ಞಾನ ಮತ್ತು ಉದ್ಯಮ ನಿರ್ವಹಣೆ ಸಂಸ್ಥೆಯೊಂದಿಗೆ ಕರ್ನಾಟಕ ಮಹಿಳಾ ಉದ್ಯಮಿಗಳ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.