ಕುಮಟಾ ಬಿಜೆಪಿ ಮಂಡಳ ವತಿಯಿಂದ ಮಹಿಳಾ ದಿನಾಚರಣೆ

ಕನ್ನಡಪ್ರಭ ವಾರ್ತೆ ಕುಮಟಾ

ಭಾರತದಲ್ಲಿ ಮಹಿಳೆಯರಿಗೆ ಅತ್ಯಂತ ವಿಶೇಷವಾಗಿ ದೇವತೆಯ ಸ್ಥಾನ ನೀಡಲಾಗಿದೆ. ಇಂದಿನ ದಿನದಲ್ಲಿ ಮಹಿಳೆಯರು ಅತ್ಯಂತ ಸಬಲೀಕರಣಗೊಳ್ಳುತ್ತಿದ್ದು, ಕುಟುಂಬ ಹಾಗೂ ದೇಶ ಚೆನ್ನಾಗಿರಬೇಕಾದರೆ ಮಹಿಳೆಯರ ಪಾತ್ರ ಬಲು ಮಹತ್ವದ್ದು ಎಂದು ಬಿಜೆಪಿ ಶಿಕ್ಷಣ ಪ್ರಕೋಷ್ಟದ ರಾಜ್ಯ ಸಹಸಂಚಾಲಕ ಎಂ.ಜಿ. ಭಟ್ ಹೇಳಿದರು.

ಬಿಜೆಪಿ ಮಂಡಲದ ವತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳಾ ದಿನಾಚರಣೆಯನ್ನು ಸಾಧಕರಿಗೆ ಸನ್ಮಾನಿಸುವ ಮೂಲಕ ಆಚರಿಸುವುದು ಸ್ತುತ್ಯಾರ್ಹ. ಸನ್ಮಾನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಮತ್ತು ಇತರರಿಗೂ ಸಾಧನೆಗೆ ಪ್ರೇರಣೆ ನೀಡುತ್ತದೆ ಎಂದರು.

ನಿವೃತ್ತ ಶಿಕ್ಷಕಿ ಸಾಧನಾ ಮಾತನಾಡಿ, ಮಹಿಳಾ ದಿನಾಚರಣೆಯ ಮಹತ್ವ ಹಾಗೂ ಮಹಿಳೆಯರ ಸಾಧನೆಗಳನ್ನು ವಿವರಿಸಿದರು. ಮಂಡಲದ ಪ್ರಭಾರಿ ಶಾರದಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಮಂಡಲಾಧ್ಯಕ್ಷ ಅಧ್ಯಕ್ಷ ಹೇಮಂತಕುಮಾರ ಗಾಂವಕರ ಉಪಸ್ಥಿತರಿದ್ದರು. ಕ್ರೀಡಾ ಸಾಧಕರಾದ ಪ್ರಣತಿ ಗೌಡ ಮತ್ತು ಅದಿತಿ ಗುಡಿಗಾರ ಅವರನ್ನು ಸನ್ಮಾನಿಸಲಾಯಿತು.


ಜಿಲ್ಲಾ ಕಾರ್ಯದರ್ಶಿ ಸೀಮಾ ಕಿಣಿ, ಪ್ರಧಾನ ಕಾರ್ಯದರ್ಶಿ ಶೈಲಾ ಗೌಡ, ಗೀತಾ ಮುಕ್ರಿ, ಮಾದೇವಿ ಮುಕ್ರಿ, ಪೂರ್ಣಿಮಾ, ಮಹಾಲಕ್ಷ್ಮಿ ಶೇಟ್ ಉಪಸ್ಥಿತರಿದ್ದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಾ ಶೇಟ್ ಕಾರ್ಯಕ್ರಮ ಸಂಯೋಜಿಸಿ, ನಿರ್ವಹಿಸಿದರು.