ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

ಕನ್ನಡಪ್ರಭ ವಾರ್ತೆ ಕೊಪ್ಪ

ಮಹಿಳೆ ಅಬಲೆ ಎಂಬ ಮನೋಭಾವದಿಂದ ಹೊರಬಂದು ತನ್ನ ಶಕ್ತಿ ಅರಿತು ಮುನ್ನಡೆದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವಾಗಬಲ್ಲದು. ಈ ನಿಟ್ಟಿನಲ್ಲಿ ಯುವ ಸಮುದಾಯದ ಅವಿಭಾಜ್ಯ ಅಂಗವಾದ ವಿದ್ಯಾರ್ಥಿನಿಯರು ರಾಷ್ಟ್ರೀಯ ಸೇವಾ ಯೋಜನೆ ಯಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡು ವ್ಯಕ್ತಿತ್ವ ವಿಕಸನಗೊಳಿಸಿಕೊಂಡು ಸರ್ವಾಂಗೀಣ ಪ್ರಗತಿ ಸಾಧಿಸಬೇಕು ಎಂದು ಕುವೆಂಪು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಸಂಯೋಜಕಿ ಡಾ. ಶುಭಾ ಮರವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಮಾಜ ಶಾಸ್ತ್ರ ವೇದಿಕೆ, ಲಯನ್ಸ್ ಕ್ಲಬ್ ಕೊಪ್ಪ ಸಹ್ಯಾದ್ರಿ, ಕೊಪ್ಪ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ೨೦೨೬ನೇ ಸಾಲಿನ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕರಾಗಿ ಭಾಗವಹಿಸಿದ್ದ ಶಿವಮೊಗ್ಗದ ಖ್ಯಾತ ಮನೋ ವೈದ್ಯ, ಅಂತಾರಾಷ್ಟ್ರೀಯ ಮಟ್ಟದ ಭರತನಾಟ್ಯ ಕಲಾವಿದೆ ಶಿವಮೊಗ್ಗದ ಬಾಲ ನ್ಯಾಯ ಮಂಡಳಿ ಸದಸ್ಯರಾದ ಡಾ. ಕೆ.ಎಸ್ ಪವಿತ್ರಾ ಭರತನಾಟ್ಯ ರೂಪಕದ ಮೂಲಕ ಲಿಂಗ ಸಮಾನತೆ, ಮಹಿಳೆಯರ ಸಾಧನೆಯಲ್ಲಿ ಪುರುಷ ಸಮಾಜದ ಸಹಕಾರದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಅನಂತ ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳಾ ದಿನಾಚರಣೆ ಕೇವಲ ಸಾಂಕೇತಿಕವಾಗದೆ ಮಹಿಳೆಯರ ಅಭಿವೃದ್ಧಿಗೆ ಸ್ಪೂರ್ತಿ ತುಂಬುವ ದಿನವಾಗಲಿ ಎಂದು ಆಶಿಸಿದರು. ಕಾಲೇಜಿನ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ಕಾಲೇಜಿನ ಮಹಿಳಾ ಬೋಧಕೇತರ ನೌಕರರಾದ ನಾಗರತ್ನ ಎನ್ ಜಿ. ವಸಂತಿ. ಎನ್. ಸೌಮ್ಮ, ಸೀತಾ, ಕಮಲ ಸೇರಿದಂತೆ ಐವರು ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಬಿ.ಎಸ್ ಈಶ್ವರಪ್ಪ ಬೆಳ್ಳಾಲೆ, ಸದಸ್ಯರಾದ ಶ್ರೀನಿಧಿ ವಿ.ಟಿ, ಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪ್ರಭಾ ಪ್ರಕಾಶ್, ಕಾಲೇಜಿನ ಐಕ್ಯೂಎಸಿ ಸಂಚಾಲಕದ ಡಾ. ನಿರಂಜನ್ ಎ.ಆರ್, ಎನ್.ಎಸ್.ಎಸ್ ಅಧಿಕಾರಿ ಸುಭಾಷ್ ಎಚ್.ಕೆ., ಎನ್.ಎಸ್.ಎಸ್. ಅಧಿಕಾರಿ ಮತ್ತು ಸಮಾಜಶಾಸ್ತ್ರ ವೇದಿಕೆ ಸಂಚಾಲಕ ಎಂ.ಜಿ. ನಾಗರಾಜ್ ಕೊಪ್ಪ, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.