8ರಿಂದ ಮಹಿಳಾ ರಾಷ್ಟ್ರೀಯ ಅಂಧರ ಟಿ-20 ಕ್ರಿಕೆಟ್‌ ಪಂದ್ಯಾವಳಿ

| Published : Jan 04 2024, 01:45 AM IST

ಸಾರಾಂಶ

ಕ್ರಿಕೆಟ್ ಅಸೋಸಿಯೇಶನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ), ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ಫಾರ್ ದಿ ಬ್ಲೈಂಡ್ (ಸಿಎಬಿಐ) ಸಹಯೋಗದಲ್ಲಿ ಜ. 8ರಿಂದ ಮಹಿಳಾ ರಾಷ್ಟ್ರೀಯ ಅಂಧರ ಟಿ-20 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.

- ಜ. 10ರಂದು ಲೀಗ್ ಹಂತದ ಪಂದ್ಯಗಳು- ಸಮರ್ಥನಂ ಸಂಸ್ಥೆಯ ಕ್ರೀಡಾ ಮುಖ್ಯಸ್ಥ ಧೀರಜ್‌

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಲ್ಲಿಯ ಸಮರ್ಥನಂ ಅಂಗವಿಕಲರ ಸಂಸ್ಥೆಯ ವತಿಯಿಂದ ಇಂಡಸ್​ಇಂಡ್​ ಬ್ಯಾಂಕ್​ ಬೆಂಬಲದೊಂದಿಗೆ ಮಹಿಳಾ ರಾಷ್ಟ್ರೀಯ ಅಂಧರ ಟಿ-20 ಕ್ರಿಕೆಟ್​ ಪಂದ್ಯಾವಳಿಯನ್ನು ಜ. 8ರಿಂದ ಮಹಾನಗರದ ವಿವಿಧ ಮೈದಾನಗಳಲ್ಲಿ ಏರ್ಪಡಿಸಲಾಗಿದೆ ಎಂದು ಸಮರ್ಥನಂ ಕ್ರೀಡಾ ವಿಭಾಗದ ಮುಖ್ಯಸ್ಥ ಧೀರಜ್​ ತಿಳಿಸಿದರು.

ಅವರು ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ರಿಕೆಟ್​ ಅಸೋಸಿಯೇಶನ್​ ಫಾರ್​ ದಿ ಬ್ಲೈಂಡ್​ ಇನ್​ ಇಂಡಿಯಾ (ಸಿಎಬಿಐ), ಕರ್ನಾಟಕ ಕ್ರಿಕೆಟ್​ ಅಸೋಸಿಯೇಶನ್​ ಫಾರ್​ ದಿ ಬ್ಲೈಂಡ್​ (ಸಿಎಬಿಐ) ಸಹಯೋಗ ನೀಡಿವೆ. ಒಟ್ಟು 16 ತಂಡಗಳು ಆಗಮಿಸಲಿದ್ದು, ನಾಲ್ಕು ಗುಂಪುಗಳಾಗಿ ವಿಂಗಡಿಸಿ ಹುಬ್ಬಳ್ಳಿಯ ಜಿಮಖಾನಾ ಮೈದಾನ, ರೈಲ್ವೆ, ಬಿಡಿಕೆ ಕ್ರಿಕೆಟ್​ ಮೈದಾನ ಹಾಗೂ ಧಾರವಾಡದ ಎಸ್​ಡಿಎಂ ಮೈದಾನದಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತದೆ ಎಂದರು.

ಜ. 7ರಂದು ಸಂಜೆ 5ಕ್ಕೆ ನಗರದ ಇಂದಿರಾ ಗಾಜಿನ ಮನೆಯಲ್ಲಿ ಕ್ರೀಡಾಕೂಟಕ್ಕೆ ಜನಪ್ರತಿನಿಧಿಗಳು, ಗಣ್ಯರ ಸಮ್ಮುಖದಲ್ಲಿ ಚಾಲನೆ ನೀಡಲಾಗುತ್ತದೆ. ಒಟ್ಟು 24 ಲೀಗ್​ ಪಂದ್ಯಗಳು ನಡೆಯಲಿವೆ.

ಲೀಗ್‌ ಹಂತವು ಜ. 10ರಂದು ಕೊನೆಗೊಳ್ಳಲಿದ್ದು, ಸೆಮಿಫೈನಲ್‌ ಅರ್ಹತೆ ಪಡೆಯುವ ನಾಲ್ಕು ತಂಡಗಳು ಜ.11ರಂದು ಅಗ್ರಸ್ಥಾನಕ್ಕಾಗಿ ಸೆಣಸಾಡಲಿವೆ. ಜ.12ರಂದು ವಿವೇಕಾನಂದ ಜಯಂತಿಯಂದು ಆಚರಿಸಲಾಗುವ ರಾಷ್ಟ್ರೀಯ ಯುವ ದಿನದಂದು ಫೈನಲ್​ ಪಂದ್ಯಗಳು ಹುಬ್ಬಳ್ಳಿಯ ಜಿಮ್‌ಖಾನಾ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿವೆ ಎಂದರು.

ಸಿಎಬಿಐ ಸಂಸ್ಥಾಪಕ ಸದಸ್ಯ ಉದಯಕುಮಾರ ಬಾಗುನವರ ಮಾತನಾಡಿ, 2012ರಲ್ಲಿ ನಗರದಲ್ಲಿ ಇಂತಹ ಕ್ರೀಡಾಕೂಟ ನಡೆದಿತ್ತು. ಇದೀಗ 4ನೇ ಆವೃತ್ತಿಯ ಮಹಿಳಾ ಕ್ರಿಕೆಟ್​ ಪಂದ್ಯವನ್ನು ನಗರದಲ್ಲಿ ಏರ್ಪಡಿಸಲಾಗುತ್ತಿದೆ. ಕರ್ನಾಟಕ, ಜಾರ್ಖಂಡ್‌, ಓಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಚಂಡೀಗಡ್‌, ತಮಿಳುನಾಡು, ಪಶ್ಚಿಮ ಬಂಗಾಲ ರಾಜ್ಯದ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದರು.

ಒಟ್ಟು ಎ, ಬಿ, ಸಿ, ಡಿ ಎಂದು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಗುಂಪು-ಎ ವಿಭಾಗದಲ್ಲಿ ಓಡಿಶಾ, ಮಧ್ಯಪ್ರದೇಶ, ಗುಜರಾತ್‌, ತೆಲಂಗಾಣ, ಗುಂಪು-ಬಿ ಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ, ಆಸ್ಸಾಂ, ಗಂಪು-ಸಿ ಯಲ್ಲಿ ದೆಹಲಿ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಗುಂಪು- ಡಿನಲ್ಲಿ ಆಂಧ್ರಪ್ರದೇಶ, ರಾಜಸ್ಥಾನ, ಚಂಡೀಗಡ್‌, ಹರಿಯಾಣ ತಂಡಗಳು ಪಾಲ್ಗೊಳ್ಳಲಿವೆ ಎಂದರು.

ಸಿಎಬಿಐ ಸದಸ್ಯ ಶಿವರಾಮ ದೇಶಪಾಂಡೆ, ಮಹಿಳಾ ಅಂಧರ ಕ್ರಿಕೆಟ್​ ನಡೆಯುತ್ತಿರುವುದು ಸಂತಸದ ಸಂಗತಿ. ಇದಕ್ಕೆ ಸಂಸ್ಥೆಯಿಂದ ಎಲ್ಲ ಸಹಕಾರ ನೀಡಲಾಗುತ್ತಿದೆ ಎಂದರು.

ಈ ವೇಳೆ ಡಾ. ಸಂಜಯ, ಲೇಡಿಸ್​ ಕ್ಲಬ್​ನ ಅನೂಲಿ ವೆರ್ಣೇಕರ, ಕೃಷ್ಣ ಲಮಾಣಿ ಸೇರಿದಂತೆ ಹಲವರಿದ್ದರು.