ಕೊಪ್ಪಳ: ಮಹಿಳಾ ಮೀಸಲಾತಿ ಜಾರಿಯಾಗುತ್ತದೆ ಎಂದು ನಾನು ಅಂದುಕೊಂಡಿಲ್ಲ. ಈ ಹಿಂದೆಯೂ ಬಹಳ ಪ್ರಯತ್ನ ಮಾಡಿದಾಗಲೂ ಅದು ಆಗಿಲ್ಲ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ವಿಷಾಧಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ರಾಜಕೀಯ ಪಕ್ಷ ಮಹಿಳಾ ಮೀಸಲಾತಿ ಪರವಾಗಿದ್ದೇವೆ ಎಂದು ತೋರಿಸುತ್ತಾರೆ, ಜಾರಿ ಮಾಡುತ್ತಿಲ್ಲ. ಮಹಿಳೆಯರು 52 ಪರ್ಸೆಂಟೇಜ್ ಇದ್ದಾರೆ. ಅವರು ಸ್ಪರ್ಧೆ ಮಾಡಿ ಒಗ್ಗಟ್ಟಾಗಿ ಗೆದ್ದು ಬರಬಹುದು. ಆದರೆ, ಅವರು ಹಾಗೆ ಮಾಡುತ್ತಿಲ್ಲ. ತಂದೆ, ಮಗ, ಪತಿ ಎಂದು ಅವರಿಗೆ ಬೆಂಬಲ ನೀಡುತ್ತಾರೆ. ಹೀಗಾಗಿ ಅವರಿಗೆ ಗೆಲ್ಲಲು ಆಗುತ್ತಿಲ್ಲ ಎಂದರು.ರಾಜ್ಯದಲ್ಲಿ ರಾಜಕೀಯ ನೈತಿಕತೆ ಕುಸಿದಿದೆ. ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸದನದಲ್ಲಿಯೂ ಜನರ ಸಮಸ್ಯೆ ಚರ್ಚೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾರ್ವಜನಿಕರ ಬದುಕಿಗೆ ಸ್ಪಂದಿಸುವುದು ಕಡಿಮೆಯಾಗಿದೆ. ವೈಯಕ್ತಿಕ ಸ್ವಾರ್ಥಕ್ಕಾಗಿ, ಕುಟುಂಬಕ್ಕಾಗಿಯೇ ರಾಜಕೀಯ ಮಾಡುತ್ತಿದ್ದಾರೆಯೇ ಹೊರತು ಜನಸೇವೆ ಮಾಡುವ ಬಯಕೆ ಇಲ್ಲ ಎಂದರು.ಸದನದಲ್ಲಿ ಒಳ್ಳೆಯ ವಿಷಯ ಚರ್ಚೆ ಮಾಡುವುದಿಲ್ಲ, ಹನಿ ಟ್ರ್ಯಾಪ್ ಮೊದಲಾದ ವಿಷಯಗಳನ್ನೇ ಪ್ರಧಾನವಾಗಿ ಚರ್ಚೆ ಮಾಡುತ್ತಾರೆ. ಈ ಬಗ್ಗೆ ಶಾಸಕರಿಗೆ ತರಬೇತಿ ನೀಡಲಾಗಿದೆ. ನಾಯಿ ಬಾಲ ಡೊಂಕು ಎನ್ನುವಂತೆ ಆಗುತ್ತಿದೆ. ಆದರೂ ಈ ಬಾರಿ ಮತ್ತೆ ಎಲ್ಲ ಶಾಸಕರಿಗೂ ತರಬೇತಿ ನೀಡುವುದಾಗಿ ಹೇಳಿದರು.
ಉತ್ತರ ಕರ್ನಾಟಕದ ಬಗ್ಗೆ ನಾನು ಚರ್ಚೆ ಮಾಡಿಲ್ಲ ಎಂದರೆ ಒಪ್ಪುವುದಿಲ್ಲ. ಮಂಗಳವಾರ ಮತ್ತು ಬುಧವಾರ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರ ಕರ್ನಾಟಕ ಬಗ್ಗೆಯೇ ಚರ್ಚೆಗೆ ವಿಧಾನಪರಿಷತ್ನಲ್ಲಿ ಅವಕಾಶ ನೀಡಲಾಗುತ್ತದೆ ಎಂದರು.