ಮಹಿಳೆಯರು ಸ್ವರಕ್ಷಣೆಗೆ ಆದ್ಯತೆ ನೀಡಲಿ: ಪಿಎಸ್‌ಐ ಉಮಾ ಪಾಟೀಲ

| Published : Mar 20 2025, 01:15 AM IST

ಮಹಿಳೆಯರು ಸ್ವರಕ್ಷಣೆಗೆ ಆದ್ಯತೆ ನೀಡಲಿ: ಪಿಎಸ್‌ಐ ಉಮಾ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು ತಾವು ತಲುಪಲು ಅರ್ಹವಾದ ಎತ್ತರವನ್ನು ಸಾಧಿಸಲು ಹೆಚ್ಚಾಗಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಹೆಚ್ಚು ಸಮಯ ಕೆಲಸ ಮಾಡಬೇಕು.

ಶಿಗ್ಗಾಂವಿ: ಮಹಿಳೆಯರು ಸ್ವರಕ್ಷಣೆಗೆ ಆದ್ಯತೆ ನೀಡಬೇಕು. ಅಲ್ಲದೇ ಸೈಬರ್ ವಂಚನೆಯನ್ನು ತಡೆಗಟ್ಟುವುದರ ಕುರಿತು ಜಾಗೃತರಾಗಬೇಕು ಎಂದು ಪಿಎಸ್‌ಐ ಉಮಾ ಪಾಟೀಲ ತಿಳಿಸಿದರು.ಪಟ್ಟಣದ ಪುರಸಭೆ ಆವರಣದಲ್ಲಿ ಜರುಗಿದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಅಲ್ಲದೆ ಸೈಬರ್ ವಂಚನೆ ತಡೆಗಟ್ಟಲು ಹೆಚ್ಚಿನ ಪ್ರಮಾಣದಲ್ಲಿ ತಿಳಿದುಕೊಳ್ಳುವುದು ಅತ್ಯವಶ್ಯವಾಗಿದೆ ಎಂದರು.ಪುರಸಭೆ ಅಧಿಕಾರಿ ಶೈಲಜಾ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ತಾವು ತಲುಪಲು ಅರ್ಹವಾದ ಎತ್ತರವನ್ನು ಸಾಧಿಸಲು ಹೆಚ್ಚಾಗಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಹೆಚ್ಚು ಸಮಯ ಕೆಲಸ ಮಾಡಬೇಕು. ಬ್ಯಾಂಕ್ ಹಾಗೂ ಸಾಲ ಸೌಲಭ್ಯವನ್ನು ಸದುಪಯೋಗವನ್ನು ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.ಆಯುರ್ವೇದಿಕ್ ವೈದ್ಯರಾದ ಡಾ. ಸರಸ್ವತಿ ಬೇವಿನಹಳ್ಳಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಪ್ರತಿನಿತ್ಯ ಪೌಷ್ಟಿಕಾಂಶಗಳ ಆಹಾರ ಸೇವನೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.ಪುರಸಭೆ ಸದಸ್ಯೆ ರೂಪಾ ಬನ್ನಿಕೊಪ್ಪ ಮಾತನಾಡಿ, ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಎಲ್ಲ ಕ್ಷೇತ್ರಗಳಲ್ಲೂ ಪ್ರವೇಶಿಸಬೇಕು ಎಂದರು.ಆರ್ಥಿಕ ಸಾಕ್ಷರತಾ ಕೇಂದ್ರದ ಅಧಿಕಾರಿ ರಾಜು ಕೆಂಭಾವಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ ಬಗ್ಗೆ ಮತ್ತು ಬ್ಯಾಂಕಿನ ಸಾಲ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿದರು.ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕಿನಿಂದ ಪುರಸಭೆಯ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆಯ ಚೆಕ್ಕನ್ನು ಬ್ಯಾಂಕಿನ ಅಧಿಕಾರಿ ಜೋಸ್ನಾ ಅವರು ವಿತರಿಸಿದರು. ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನುರಾಧ ಮಾಳವಾದೆ ಪುರಸಭೆ ಸದಸ್ಯರಾದ ಸಂಗೀತ ವಾಲ್ಮೀಕಿ, ರೇಖಾ ಕಂಕಣವಾಡ, ಮಾಬುಬಿ ನೀರಲಗಿ ಹಾಗೂ ಆಶ್ರಯ ಕಮಿಟಿ ಸದಸ್ಯರಾದ ಲಕ್ಷ್ಮಿ ಕಟ್ಟಿಮನಿ ಮತ್ತು ಪುರಸಭೆ ಅಧಿಕಾರಿಗಳಾದ ಛಾಯಾ, ಅಕ್ಕಮ್ಮ, ಗಿರಿಜಾ ಹಾಗೂ ಪುರಸಭೆಯ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.ವೈನ್ ಶಾಪ್ ಕಳ್ಳತನಕ್ಕೆ ಯತ್ನ

ಶಿಗ್ಗಾಂವಿ: ವೈನ್‌ಶಾಪ್ ಕಳ್ಳತನಕ್ಕೆ ಯತ್ನಿಸಿದ ಘಟನೆ ತಾಲೂಕಿನ ದುಂಡಶಿ ಗ್ರಾಮದ ಹೊರವಲಯದಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.ತಾಲೂಕಿನ ದುಂಡಶಿ ಗ್ರಾಮದ ವಿನಾಯಕ ಬಾರ್‌ನಲ್ಲಿ ರಾತ್ರಿ ವೇಳೆ ಅಂಗಡಿ ಶೆಟರ್ಸ್‌ ಅನ್ನು ಹಾರೆಯಿಂದ ಮುರಿದು ಒಳನುಗ್ಗಲು ಯತ್ನಿಸಿದ್ದಾರೆ. ಆಗ ಒಳಗಿದ್ದ ಇಬ್ಬರು ಕಾರ್ಮಿಕರು ಹೊರಗೆ ಓಡಿ ಬಂದಿದ್ದಾರೆ. ಇದರಿಂದ ಬೆದರಿದ ನಾಲ್ಕು ಮುಸುಕುಧಾರಿ ಕಳ್ಳರು ಕಾರಿನ ಮೂಲಕ ಪರಾರಿಯಾಗಿದ್ದಾರೆ. ಆದರೆ ಈ ಕುರಿತು ಪ್ರಕರಣ ದಾಖಲಾಗಿಲ್ಲ.

ಈ ಭಾಗದಲ್ಲಿ ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಸಮೀಪದ ಶ್ಯಾಡಂಬಿ ಗ್ರಾಮದಲ್ಲಿ ಇತ್ತೀಚೆಗೆ ಜಾನುವಾರುವೊಂದನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಕಳ್ಳರನ್ನು ಸೆರೆ ಹಿಡಿಯುವ ಕಾರ್ಯ ಆಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.