ಸಾರಾಂಶ
ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದ ಮನರೇಗಾ ಯೋಜನೆಯಡಿ ನಡೆದ ಸಾಮೂಹಿಕ ಕಾಮಗಾರಿಗಳನ್ನು ಜಿಪಂ ಎಡಿಪಿಸಿ ಕಿರಣಕುಮಾರ ವೀಕ್ಷಣೆ ಮಾಡಿದರು.
ಗದಗ: ಮನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗುತ್ತಿದ್ದು, ಪ್ರತಿಯೊಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿವಸ ಕೂಲಿ ಕೆಲಸವನ್ನು ನೀಡಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುತ್ತಿದೆ ಎಂದು ಜಿಪಂ ಎಡಿಪಿಸಿ ಕಿರಣಕುಮಾರ ಹೇಳಿದರು.
ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದ ಮನರೇಗಾ ಯೋಜನೆಯಡಿ ನಡೆದ ಸಾಮೂಹಿಕ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲೆಡೆ ಆಯುಕ್ತಾಲಯದ ನಿರ್ದೇಶನದಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ ಹಮ್ಮಿಕೊಂಡಿದ್ದು, ಮೇ ಅಂತ್ಯದ ವರೆಗೆ ಅಭಿಯಾನ ಇರುತ್ತದೆ. ಅಳತೆಗೆ ತಕ್ಕ ಹಾಗೆ ಪಡ ಕಡೆಯುವುದು, ಕಡಿಸುವುದು ನಿಮ್ಮ ಕರ್ತವ್ಯ ಎಂದು ಹೇಳಿದರು.ಅಲ್ಲದೆ ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಕೆಲಸದ ಸ್ಥಳಗಳಲ್ಲಿ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ, ನೆರಳು, ಕುಡಿಯುವ ನೀರಿನ ವ್ಯವಸ್ಥೆ ಗ್ರಾಪಂ ಮಾಡಿದೆ. ಕೂಲಿಕಾರರು ಕೆಲಸದ ಸ್ಥಳದಲ್ಲಿ ಮಕ್ಕಳನ್ನು ಕರೆ ತರಬಾರದು. ಅದಕ್ಕಾಗಿ ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ನಮ್ಮ ಗ್ರಾಪಂನಿಂದ ಕೂಸಿನ ಮನೆ ಆರಂಭ ಮಾಡಿದ್ದು, ಮಕ್ಕಳನ್ನು ಅಲ್ಲಿಯೇ ಬಿಟ್ಟು ಕೆಲಸಕ್ಕೆ ಹೋಗಲು ಅವಕಾಶವಿದೆ ಎಂದರು.
ಮತದಾನ ಜಾಗೃತಿ: ದೇಶದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುವುದನ್ನು ಮರೆಯಬೇಡಿ. ಕಡ್ಡಾಯವಾಗಿ ಮತದಾನ ಮಾಡಿ. ಮತದಾನ ನಿಮ್ಮ ಹಕ್ಕು ಹೌದು, ಕರ್ತವ್ಯವು ಆಗಿದೆ. ಈ ಹಿನ್ನೆಲೆ ಕಡ್ಡಾಯವಾಗಿ ಮತದಾನ ಮಾಡಿ ಎಂದು ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಲಾಯಿತು. ಬಳಿಕ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.ತಾಂತ್ರಿಕ ಸಂಯೋಜಕ ಪ್ರಕಾಶ, ತಾಂತ್ರಿಕ ಸಹಾಯಕ ಪ್ರದೀಪ ನರೇಗಲ್, ಗ್ರಾಮ ಕಾಯಕ ಮಿತ್ರರು, ನರೇಗಾ ಕೂಲಿ ಕಾರ್ಮಿಕರು, ಗ್ರಾಪಂ ಸಿಬ್ಬಂದಿ ಇದ್ದರು.