ಯಲಬುರ್ಗಾ ತಾಲೂಕಿನ ಗಾಣಧಾಳ, ಬೇವೂರು, ಹಿರೇವಂಕಲಕುಂಟಾ ಸೇರಿದಂತೆ ನಾನಾ ಗ್ರಾಮಗಳಲ್ಲಿ ಸೋಮವಾರ ಜನಸಂದರ್ಶನ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಚಾಲನೆ ನೀಡಿದರು.
ಯಲಬುರ್ಗಾ: ಕ್ಷೇತ್ರದಲ್ಲಿ ಮತ್ತೆ ಕೆರೆ ತುಂಬಿಸುವ ಯೋಜನೆಯಡಿ ೩೪ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಗಾಣಧಾಳ, ಬೇವೂರು, ಹಿರೇವಂಕಲಕುಂಟಾ ಸೇರಿದಂತೆ ನಾನಾ ಗ್ರಾಮಗಳಲ್ಲಿ ಸೋಮವಾರ ಜನಸಂದರ್ಶನ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ೨ನೇ ಹಂತದ ಕೆರೆ ತುಂಬಿಸುವ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈಗಾಗಲೇ ಮೊದಲ ಹಂತದಲ್ಲಿ ೨೪ ಕೆರೆಗಳಿಗೆ ನೀರು ಹರಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.ಯಲಬುರ್ಗಾ ತಾಲೂಕಿಗೆ ಡಿಸಿಎಂ ಜಿ. ಪರಮೇಶ್ವರ ಭೇಟಿ ನೀಡಲಿದ್ದು, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ಈಗಾಗಲೇ ೧೦೧ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಎರಡನೇ ಹಂತದಲ್ಲಿ ೭೦ರಿಂದ ೮೦ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗುವುದು ಎಂದು ಹೇಳಿದರು.
ನನ್ನ ಅವಧಿಯಲ್ಲಿ ಯಲಬುರ್ಗಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಜಾತಿ ಮತ್ತು ಧರ್ಮ ರಾಜಕಾರಣದಲ್ಲಿ ಬರಬಾರದು. ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒಗಳಾದ ನೀಲಗಂಗಾ ಬಬಲಾದಿ, ಬೆಟದೇಶ ಮಾಳೆಕೊಪ್ಪ, ಅಧಿಕಾರಿಗಳಾದ ಬಿ. ಮಲ್ಲಿಕಾರ್ಜುನ, ಚನ್ನಪ್ಪ ಎಸ್.ಒ., ಶ್ರೀನಿವಾಸ ಜಿ. ಬನ್ನಿಗೋಳ, ಗಣ್ಯರಾದ ರಾಘವೇಂದ್ರಾಚಾರ್ ಜೋಶಿ, ಮಹೇಶ ಹಳ್ಳಿ, ರಾಮಣ್ಣ ಸಾಲಬಾವಿ, ರೇವಣಪ್ಪ ಸಂಗಟಿ, ಈಶ್ವರ ಅಟಮಾಳಗಿ, ಅಪ್ಪಣ್ಣ ಜೋಶಿ, ನಾಗರಾಜ ನವಲಹಳ್ಳಿ, ಹನುಮಂತಪ್ಪ ಕಲ್ಲಭಾವಿ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ರುದ್ರಪ್ಪ ಮರಕಟ್, ಹಂಪಯ್ಯಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಜಕ್ಕಲಿ, ಬಸವರಾಜ ಹಿರೇಮನಿ, ಸೋಮನಗೌಡ ಪಾಟೀಲ್, ಗವಿಸಿದ್ದಪ್ಪ ಚೆಂಡೂರು ಇದ್ದರು.