ಒಗ್ಗಟ್ಟಿನಿಂದ ಕೆಲಸ ಮಾಡಿ ಅಭಿವೃದ್ಧಿಗೆ ಶ್ರಮಿಸಿ: ಶಾಸಕ ಲಕ್ಷ್ಮಣ ಸವದಿ ಸಲಹೆ

| Published : Oct 01 2024, 01:40 AM IST

ಒಗ್ಗಟ್ಟಿನಿಂದ ಕೆಲಸ ಮಾಡಿ ಅಭಿವೃದ್ಧಿಗೆ ಶ್ರಮಿಸಿ: ಶಾಸಕ ಲಕ್ಷ್ಮಣ ಸವದಿ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು, ಸಿಬ್ಬಂದಿ ಸಮನ್ವಯತೆಯಿಂದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿ ಅನುಷ್ಠಾನಗೊಳಿಸಬೇಕು. ಶಾಸಕನಾಗಿ ನಾನು ಕೂಡ ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಪಟ್ಟಣದ ಸೌಂದರ್ಯ, ಜೋಡಿ ಕೆರೆಗಳ ಅಭಿವೃದ್ಧಿ, ಪುರಸಭೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು, ಸಿಬ್ಬಂದಿ ಸಮನ್ವಯತೆಯಿಂದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿ ಅನುಷ್ಠಾನಗೊಳಿಸಬೇಕು. ಶಾಸಕನಾಗಿ ನಾನು ಕೂಡ ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಪಟ್ಟಣದ ಸೌಂದರ್ಯ, ಜೋಡಿ ಕೆರೆಗಳ ಅಭಿವೃದ್ಧಿ, ಪುರಸಭೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಮೀಸಲಾತಿ ಪ್ರಕಟಗೊಂಡು ಅಧ್ಯಕ್ಷ-ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡ ಬಳಿಕ ಸೋಮವಾರ ನಡೆದ ಮೊದಲ ಪುರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಇದೆ ವೇಳೆ ನೂತನ ಅಧ್ಯಕ್ಷೆ ಶಿವಲೀಲಾ ಸದಾಶಿವ ಬುಟಾಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಪುರಸಭೆ ಸದಸ್ಯರು ತಮ್ಮ ವಾರ್ಡ್‌ಗಳ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಪಟ್ಟಣದ ಐತಿಹಾಸಿಕ ಜೋಡಿ ಕೆರೆಗಳನ್ನು ಸುಮಾರು ₹15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ವಾಯುವಿಹಾರ, ಮಕ್ಕಳ ಪಾರ್ಕ್, ಬೋಟಿಂಗ್ ವ್ಯವಸ್ಥೆ ಕಲ್ಪಿಸಲು ನೀಲನಕ್ಷೆ ತಯಾರಿಸಿ ಟೆಂಡರ್ ಮೂಲಕ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಸುಮಾರು ₹10 ಕೋಟಿ ವೆಚ್ಚದಲ್ಲಿ ಸಿದ್ದೇಶ್ವರ ದೇವಸ್ಥಾನದಿಂದ ಮಿರಜ್ ರಸ್ತೆಯವರೆಗೆ ಭಾಗೀರಥಿ ನಾಲಾ ಅಭಿವೃದ್ಧಿಪಡಿಸಲು ಹೊಸ ನೀಲನಕ್ಷೆ ತಯಾರಿಸುವಂತೆ ಎಂಜಿನಿಯರ್‌ಗಳಿಗೆ ಸೂಚಿಸಲಾಯಿತು.

ಅಥಣಿ ಪುರಸಭೆಯ ನೂತನ ಕಟ್ಟಡ ಸ್ಥಾಪನೆ ಬಗ್ಗೆ ಚರ್ಚಿಸಿ ಈಗಾಗಲೇ ಸರ್ಕಾರಕ್ಕೆ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಪ್ರಸ್ತಾವ ಸಲ್ಲಿಸಿದ್ದು, ನಗರಸಭೆ ಆಡಳಿತಕ್ಕೆ ಸಂಬಂಧಿಸಿದ ವ್ಯವಸ್ಥಿತ ಕಟ್ಟಡ ನಿರ್ಮಿಸುವುದು, ಪಟ್ಟಣದ ಹೊರಭಾಗದಲ್ಲಿ ಪ್ರಮುಖ ರಸ್ತೆಗಳಲ್ಲಿ ದ್ವಾರಬಾಗಿಲು ನಿರ್ಮಿಸುವುದು, ಅಥಣಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಮತ್ತು ವಾಹನಗಳ ಕಿರಿಕಿರಿ ತಪ್ಪಿಸಲು ತರಕಾರಿ ಹರಾಜು ಪ್ರಕ್ರಿಯೆ ಬೇರೆಡೆಗೆ ಸ್ಥಳಾಂತರಿಸಬೇಕು. ಜತೆಗೆ ಸರಕು ಸಾಗಾಣಿಕೆ ವಾಹನಗಳಿಗೆ ಸಮಯ ನಿಗದಿ ಮಾಡಲು ನಿರ್ಣಯಿಸಲಾಯಿತು.

ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳಿದ್ದು, ಹೆಚ್ಚುವರಿ ಕಸದ ವಾಹನ ಖರೀದಿಸುವುದು, ಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಿಸಿಕೊಳ್ಳುವ ಕುರಿತಾಗಿಯೂ ಚರ್ಚಿಸಲಾಯಿತು.

ಪುರಸಭೆ ವತಿಯಿಂದ ನಿರ್ಮಿಸಲಾದ ವಾಣಿಜ್ಯ ಮಳಿಗೆ ಮತ್ತೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಸಿ ಹರಾಜು ನೀಡುವುದು, ಈಗಾಗಲೇ ನೀಡಲಾಗಿರುವ ವಾಣಿಜ್ಯ ಮಳಿಗೆಗಳು ಮತ್ತು ಇನ್ನಿತರೆ ವ್ಯಾಪಾರಸ್ಥರ ಪರವಾನಗಿ ನವೀಕರಣ ಮಾಡುವುದರ ಜೊತೆಗೆ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಮತ್ತು ದೊಡ್ಡ ವ್ಯಾಪಾರಸ್ಥರಿಗೆ ಪ್ರತ್ಯೇಕ ತೆರಿಗೆ ಆಕರಣೆ ಮಾಡುವಂತೆ ನಿರ್ಣಯಿಸಲಾಯಿತು. ವಿವಿಧ ವಾರ್ಡ್‌ಗಳಲ್ಲಿ ಪಡೆದುಕೊಂಡಿರುವ ತುಂಡುಗುತ್ತಿಗೆ ಕಾಮಗಾರಿಗಳು ಅಪೂರ್ಣವಾಗಿದ್ದು, ಅವುಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು. ಪಟ್ಟಣದ ಆರು ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡುವುದು, ಎಸ್ಸಿ,ಎಸ್ಟಿ ಸ್ಮಶಾನ ಭೂಮಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಮೂಲ ಸೌಲಭ್ಯ ಒದಗಿಸುವುದು, ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಉದ್ಯಾನ ಮತ್ತು ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಅಭಿವೃದ್ಧಿ ಕೈಗೊಳ್ಳುವುದು ಸೇರಿದಂತೆ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಹಲವು ವಿಷಯಗಳನ್ನು ಚರ್ಚಿಸಲಾಯಿತು.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಭಾಗೀರಥಿ ನಾಲಾದಲ್ಲಿ ಕೊಚ್ಚಿ ಹೋಗಿ ಸಾವಿಗೀಡಾದ ಗುರುರಾಜ ಯಾದವಾಡ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಪರಿಹಾರಧನ ಆದೇಶ ಪತ್ರವನ್ನು ಶಾಸಕ ಲಕ್ಷ್ಮಣ ಸವದಿ ಇದೆ ವೇಳೆ ವಿತರಿಸಿದರು.

ಸಾಮಾನ್ಯ ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಭುವನೇಶ್ವರಿ ಬೀರಪ್ಪ ಯಕ್ಕಂಚಿ, ಆಡಳಿತ ಮಂಡಳಿ ಸದಸ್ಯರಾದ ರಾವಸಾಬ ಐಹೊಳೆ, ದತ್ತಾ ವಾಸ್ಟರ್, ಸಂತೋಷ ಸಾವಡಕರ, ಕಲ್ಲೇಶ ಮಡ್ಡಿ, ಮೃಣಾಲಿನಿ ದೇಶಪಾಂಡೆ, ವಿದ್ಯಾ ಐಹೊಳೆ, ಮಲ್ಲಿಕಾರ್ಜುನ ಬುಠಾಳಿ, ರಾಜಶೇಖರ ಗುಡ್ಡೋಡಗಿ, ವಿಲನ್ ಯಳಮಲ್ಲಿ, ರಮೇಶ ಪವಾರ ಸೇರಿದಂತೆ ಸದಸ್ಯರು ಇದ್ದರು.ಪುರಸಭೆ ಇತಿಹಾಸದಲ್ಲಿಯೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ವಿರೋಧಪಕ್ಷವೇ ಇಲ್ಲದ ಈ ಆಡಳಿತ ಮಂಡಳಿಯಿಂದ ಪಟ್ಟಣದ 27 ವಾರ್ಡ್‌ಗಳ ಜನತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸಿದ್ದಾರೆ. ಈಗಾಗಲೇ ₹25 ಕೋಟಿ ಅನುದಾನವನ್ನು ಪುರಸಭೆಗೆ ಒದಗಿಸಿದ್ದು, ಕೆರೆಗಳ ಅಭಿವೃದ್ಧಿ ಮತ್ತು ಭಾಗೀರಥಿ ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕು.

-ಲಕ್ಷ್ಮಣ ಸವದಿ ಶಾಸಕರು ಅಥಣಿ ಮತಕ್ಷೇತ್ರ