ಕನ್ನಡಪ್ರಭ ವಾರ್ತೆ ಬೆಂಗಳೂರು
ಜೀವನದಲ್ಲಿ ಜಿಗುಪ್ಸೆಗೊಂಡು ಚಲಿಸುವ ಲಾರಿಗೆ ಸಿಲುಕಿ ಕೂಲಿ ಕಾರ್ಮಿಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಜಾರ್ಖಂಡ್ ಮೂಲದ ರಾಜು (38) ಮೃತ ದುರ್ದೈವಿ. ಕೆಂಗೇರಿಯ ದೊಡ್ಡಬೆಲೆ ಮುಖ್ಯರಸ್ತೆಯಲ್ಲಿರುವ ಪ್ರಾವಿಡೆಂಟ್ ಅಪಾರ್ಟ್ಮೆಂಟ್ ಈ ಅವಘಡ ಸಂಭವಿಸಿದೆ ಎಂದು ಪೊಲೀಸು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ತನ್ನ ಸೋದರ ಸಂಬಂಧಿ ಜತೆ ನಗರಕ್ಕೆ ಕೂಲಿ ಅರಸಿ ರಾಜು ಬಂದಿದ್ದ. ಏ.13 ರಂದು ದೊಡ್ಡಬೆಲೆಯ ಪ್ರಾವಿಡೆಂಟ್ ಅಪಾರ್ಟ್ಮೆಂಟ್ ಬಳಿ ಕೆಲಸ ಕೇಳಿಕೊಂಡು ಆತ ಹೋಗಿದ್ದ. ಆಗ ಮರು ದಿನ ಬರುವಂತೆ ರಾಜುಗೆ ಅಪಾರ್ಟ್ಮೆಂಟ್ ನವರು ಹೇಳಿದ್ದರು. ಅಲ್ಲಿಂದ ಹೊರಬಂದು ರಸ್ತೆ ಬದಿ ಚಹಾ ಅಂಗಡಿಯಲ್ಲಿ ಚಹಾ ಕುಡಿಯುತ್ತ ಕುಳಿತಿದ್ದ ರಾಜು, ಏಕಾಏಕಿ ರಸ್ತೆಯಲ್ಲಿ ಬಂದ ಲಾರಿಗೆ ಎದುರಿಗೆ ಜಿಗಿದಿದ್ದಾನೆ. ಈ ಅನಿರೀಕ್ಷಿತವಾಗಿ ಅಡ್ಡ ಬಂದಿದ್ದರಿಂದ ಬ್ರೇಕ್ ಹಾಕಲು ಸಾಧ್ಯವಾಗದೆ ರಾಜುಗೆ ಲಾರಿಯನ್ನು ಚಾಲಕ ಗುದ್ದಿಸಿದ್ದಾನೆ. ಇದರಿಂದ ಕೆಳಗೆ ಬಿದ್ದ ಆತನ ಮೇಲೆ ಲಾರಿ ಚಕ್ರಗಳು ಹರಿದಿವೆ. ತೀವ್ರವಾಗಿ ಗಾಯಗೊಂಡು ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.ಮೃತ ರಾಜು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಈ ಸಾಲ ತೀರಿಸುವ ಸಲುವಾಗಿ ಕೂಲಿ ಅರಸಿ ನಗರಕ್ಕೆ ಆತ ಬಂದಿದ್ದ. ಆದರೆ ವೈಯಕ್ತಿಕ ಸಮಸ್ಯೆಗಳಿಂದ ಜಿಗುಪ್ಸೆಗೊಂಡು ಆತ ಆತ್ಮಹತ್ಯೆ ನಿರ್ಧಾರ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
