ಕನ್ನಡಪ್ರಭ ವಾರ್ತೆ ಜಮಖಂಡಿ
ಬಸವತತ್ವ ಪಾಲನೆಯಿಂದ ವಿಶ್ವ ಮಾನವರಾಗಲು ಸಾಧ್ಯ. ಬಸವತತ್ವ ಕೇವಲ ಪ್ರವಚನಕ್ಕೆ ಸೀಮಿತ ಆಗಬಾರದು. ಬದಲಾಗಿ ಆಚರಣೆಗೆ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು. ಬಸವ ಜಯಂತಿ ನಿಮಿತ್ತ ನಗರದ ಓಲೆಮಠದ ಜಾತ್ರಾಮಹೋತ್ಸವ ಕೊನೆಯ ದಿನವಾದ ಸೋಮವಾರ ಸಂಜೆ ನಡೆದ ಬಸವ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಬದುಕು, ರಾಜಕಾರಣ, ಆಹಾರ, ನೀರು ಎಲ್ಲವೂ ಕಲುಷಿತಗೊಂಡಿದೆ. ಮಾನವನಿಗೆ ದಿಕ್ಕು ತೋಚಲಾರದಂತಾಗಿದೆ. ಮನುಷ್ಯರನ್ನು ಮನುಷ್ಯರಂತೆ ಕಾಣದ ಸ್ಥಿತಿ ನಿರ್ಮಾಣ ಆಗಿದೆ. ಧರ್ಮ-ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿದೆ. ಒಂದೇ ಧರ್ಮದ ಒಳಗಡೆಯೂ ಸಂಘರ್ಷ ನಡೆಯುತ್ತಿದೆ. ಮನುಷ್ಯ ಯಾವ ದಿಕ್ಕಿಗೆ ಸಾಗುತ್ತಿದ್ದಾನೆ ಗೊತ್ತಿಲ್ಲ. ಇಂತಹ ಕಲುಷಿತ ವಾತಾವರಣ ತಿಳಿಸಿಗೊಳಿಸಲು ಮಠಮಾನ್ಯಗಳು ಮುಂದಾಗಬೇಕೆಂದು ಅಭಿಪ್ರಾಯಪಟ್ಟರು.ಉದ್ಯಮಿ ಸಂಗಮೇಶ ನಿರಾಣಿ ಮುಖ್ಯ ಅತಿಥಿಯಾಗಿ ಮಾತನಾಡಿ, ಓಲೆಮಠದ ಪೂಜ್ಯರು ಕೈಗೊಂಡಿರುವ ವ್ಯಸನಮುಕ್ತ ಗ್ರಾಮಗಳ ನಿರ್ಮಾಣದ ಜನಜಾಗೃತಿ ಅಭಿಯಾನ ಯಶಸ್ವಿಯಾಗಿದೆ. ಶ್ರೀಗಳ ಪಟ್ಟಾಧಿಕಾರ ಸಮಾರಂಭವನ್ನು ಅದ್ಧೂರಿಯಾಗಿ ಮಾಡೊಣ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಅಂಜುಮನ್ ಎ-ಇಸ್ಲಾಂ ಕಮೀಟಿ ಅಧ್ಯಕ್ಷ ತೌಫೀಕ್ ಪಾರ್ಥನಳ್ಳಿ, ಪ್ರಾ.ಶಾ.ಶಿ. ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಬಾಗೇನವರ ಮಾತನಾಡಿದರು. ಮಹಾದೇವಪ್ಪ ಝುಲಪಿ ವಿರಚಿತ ವೈಜ್ಞಾನಿಕ ವೈಚಾರಿಕ ಪ್ರಜ್ಞೆ-2, ವಿಶ್ವಗುರು ಬಸವಣ್ಣನವರ ನೂರೊಂದು ವಚನ ದೀಪ್ತಿ ಮಾಲಿಕೆ-4 ಕೃತಿಗಳನ್ನು ಲೋಕರ್ಪಣೆ ಮಾಡಲಾಯಿತು.ಮಂಜುನಾಥ ಬೋಸಲೆ, ಪುಟ್ಟ ಬಾಲಕಿ ನಿಸರ್ಗ ಕರ್ಕರಿ ಭರತನಾಟ್ಯ ಪ್ರದರ್ಶನ ನೀಡಿದರು. ಲಿಂಗರಾಜ ಸಿಂಗಾಡಿ, ಶಂಕರ ಅಂಬಿಗೇರ ಹಾಡು ಹೇಳಿದರು. ಅಕ್ಷತಾ ಮಹಾಲಿಂಗಪುರಮಠ ನೃತ್ಯ ಪ್ರದರ್ಶಿಸಿದರು. ಸಾನಿಯಾ ಹುನಗುಂದ ಹಾಗೂ ತಂಡದಿಂದ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ-ಅಲ್ಲಮಪ್ರಭು ನಡುವೆ ನಡೆದ ಸಂವಾದ ಕುರಿತು ಪ್ರದರ್ಶನ ನೀಡಿದರು.
ಓಲೆಮಠದ ಆನಂದ ದೇವರು ನೇತೃತ್ವ ವಹಿಸಿದ್ದರು. ಹುಲ್ಯಾಳದ ದುಂಡಯ್ಯ ಸ್ವಾಮಿಗಳು, ಆಲಗೂರಿನ ಲಕ್ಷ್ಮಣ ಮುತ್ಯಾ, ಅರ್ಜುಣಗಿಯ ಗುರುದೇವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಹೋಳಗಿ, ಬಾಹುಬಲಿ ಆಲಗೂರ, ಅಪ್ಪಾಸಾಹೇಬ ದೇವರವರ, ಕಾಸಪ್ಪ ಸನದಿ, ಪ್ರಭಾ ಪಾರಸಿ, ಭಾರತಿ ಜಾಧವ, ಗಿರಿಜಾ ದೊಡಮನಿ, ಮುತ್ತವ್ವ ಪೂಜಾರಿ, ಅಬೂಬಕರ ಕುಡಚಿ, ಸಿ.ಜಿ. ಕಡಕೋಳ, ಪಿ.ಬಿ. ಅಜ್ಜನವರ, ನರಸಿಂಹ ಕಲ್ಲೊಳ್ಳಿ, ಏಗಪ್ಪ ಸವದಿ, ಪ್ರಭು ಜನವಾಡ, ಎಚ್.ಎಂ. ಶೆಟ್ಟರ, ರಾಜು ಗಸ್ತಿ, ಎಂ.ಬಿ. ಇಂಡಿ, ಧನರಾಜ ಮೋರೆ, ಮಲ್ಲಿಕಾರ್ಜುನ ನಿಂಗನೂರ ಇತರರು ಇದ್ದರು.ಶ್ರುತಿ ನಿಗಡೆ, ಎಸ್.ಎಚ್. ಮಠಪತಿ ನಿರೂಪಿಸಿ, ವಂದಿಸಿದರು.