ರಾಜ್ಯದಲ್ಲಿ ಬೃಹತ್ ಸಂಖ್ಯೆಯಲ್ಲಿನ ಸಂಘಟಿತ-ಅಸಂಘಟಿತ- ಯೋಜನಾ ಕಾರ್ಮಿಕರ ಬದುಕನ್ನು ರಕ್ಷಿಸುವ ಜವಾಬ್ದಾರಿಯು ರಾಜ್ಯ ಸರ್ಕಾರದ ಹೊಣೆಯಾಗಿದೆ. ಕಾರ್ಮಿಕರ ಕುರಿತ ವಿಚಾರಗಳು ಸಂವಿಧಾದ ಸಮವರ್ತಿ ಪಟ್ಟಿಯಲ್ಲಿರುವ ಕಾರಣ, ರಾಜ್ಯ ಸರ್ಕಾರದ ಅಧಿಕಾರವನ್ನು ಬಳಸಿಕೊಂಡು ವೈಜ್ಞಾನಿಕ ಕನಿಷ್ಠ ವೇತನವನ್ನು ಜಾರಿಗೆ ತರುವುದು ಸಾಧ್ಯವಿದೆ.
ಹುಬ್ಬಳ್ಳಿ:
ವೈಜ್ಞಾನಿಕ ಕನಿಷ್ಠ ವೇತನ ಜಾರಿ, ಕಾರ್ಮಿಕ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಏ. 14ರಿಂದ ಮೇ 30ರ ವರೆಗೆ ಸಿಐಟಿಯು ಕರೆ ನೀಡಿರುವ ಸಹಿ ಸಂಗ್ರಹ ಚಳವಳಿಗೆ ಅಮರಗೋಳ ಎಪಿಎಂಸಿಯಲ್ಲಿ ಚಾಲನೆ ನೀಡಲಾಯಿತು.ಎಪಿಎಂಸಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ರಾಜ್ಯದಲ್ಲಿ ಬೃಹತ್ ಸಂಖ್ಯೆಯಲ್ಲಿನ ಸಂಘಟಿತ-ಅಸಂಘಟಿತ- ಯೋಜನಾ ಕಾರ್ಮಿಕರ ಬದುಕನ್ನು ರಕ್ಷಿಸುವ ಜವಾಬ್ದಾರಿಯು ರಾಜ್ಯ ಸರ್ಕಾರದ ಹೊಣೆಯಾಗಿದೆ. ಕಾರ್ಮಿಕರ ಕುರಿತ ವಿಚಾರಗಳು ಸಂವಿಧಾದ ಸಮವರ್ತಿ ಪಟ್ಟಿಯಲ್ಲಿರುವ ಕಾರಣ, ರಾಜ್ಯ ಸರ್ಕಾರದ ಅಧಿಕಾರವನ್ನು ಬಳಸಿಕೊಂಡು ವೈಜ್ಞಾನಿಕ ಕನಿಷ್ಠ ವೇತನವನ್ನು ಜಾರಿಗೆ ತರುವುದು ಸಾಧ್ಯವಿದೆ ಎಂದು ಹೇಳಿದರು.
ಕೇಂದ್ರ ಒಕ್ಕೂಟ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವ 4 ಕಾರ್ಮಿಕ ಸಂಹಿತೆಗಳಲ್ಲಿ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಸ್ತಾಪಗಳಿಗೆ ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿ ರಕ್ಷಿಸಲು ಅಗತ್ಯವಾದ ತಿದ್ದುಪಡಿ ಮಾಡಿದ ನಂತರ ರಾಜ್ಯದಲ್ಲಿ ನಿಯಮಾವಳಿ ರೂಪಿಸಲು ಅವಕಾಶವಿದೆ ಎಂದರು.ಏ. 1ರ 2025ರಲ್ಲಿ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಲಾಗಿದ್ದರೂ ಈ ವರೆಗೆ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ರಾಜ್ಯದಲ್ಲಿನ ಕಾರ್ಮಿಕರಿಗೆ ನೀಡಬೇಕಾದ ವೈಜ್ಞಾನಿಕ ಕನಿಷ್ಠ ಕೂಲಿಯ ಅಂತಿಮ ಪ್ರಕಟಣೆ ಮಾಡಿದೆ ಇರುವುದು ಖಂಡನೀಯ. ಕೂಡಲೇ ಸರ್ಕಾರ ಅಂತಿಮ ಪ್ರಕಟಣೆ ಮಾಡಬೇಕು. ಜತೆಗೆ ಲೋಡಿಂಗ್-ಅನ್ಲೋಡಿಗ್ ಉದ್ದಿಮೆಯ (ಹಮಾಲಿ ಐಟಂವಾರು) ಕನಿಷ್ಠ ವೇತನ ಪರಿಷ್ಕರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಮುಖಂಡರಾದ ಗುರುಸಿದ್ದಪ್ಪ ಅಂಬಿಗೇರ, ಬಸವಣ್ಣೆಪ್ಪ ನೀರಲಗಿ, ಮಂಜುನಾಥ ಹುಜರಾತಿ, ಹನಮಂತ ಅಂಬಿಗೇರ, ಸೈಯದಸಾಬ್ ಗಂಗಾವತಿ, ಮುಡಿಯಪ್ಪ ಸಕ್ರಣ್ಣವರ, ಬಸವರಾಜ ಯಲಜಿ ಮುಂತಾದವರು ಉಪಸ್ಥಿತರಿದ್ದರು.