ಕಾರ್ಮಿಕ ಕಾರ್ಡ್‌, ಕಾರ್ಮಿಕರಿಗೇ ಸಿಗಬೇಕು

| Published : Dec 23 2024, 01:03 AM IST

ಸಾರಾಂಶ

ನೈಜ ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಸರ್ಕಾರದ ಸವಲತ್ತು, ಬೋಗಸ್‌ ಕಾರ್ಡ್‌ದಾರರು ಪಡೆಯುತ್ತಿದ್ದಾರೆ ಎಂದು ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್‌ ಪೇಡರೇಷನ್‌ನ ರಾಜ್ಯಾಧ್ಯಕ್ಷ ಶಾಮಣ್ಣ ರೆಡ್ಡಿ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಸ್ಟೇಟ್‌ ಪೇಡರೇಷನ್‌ನ ರಾಜ್ಯಾಧ್ಯಕ್ಷ ಶಾಮಣ್ಣ ರೆಡ್ಡಿ ಆಗ್ರಹ

ಕನ್ನಡಪ್ರಭ ವಾರ್ತೆ ಆನವಟ್ಟಿ

ನೈಜ ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಸರ್ಕಾರದ ಸವಲತ್ತು, ಬೋಗಸ್‌ ಕಾರ್ಡ್‌ದಾರರು ಪಡೆಯುತ್ತಿದ್ದಾರೆ ಎಂದು ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್‌ ಪೇಡರೇಷನ್‌ನ ರಾಜ್ಯಾಧ್ಯಕ್ಷ ಶಾಮಣ್ಣ ರೆಡ್ಡಿ ಕಳವಳ ವ್ಯಕ್ತಪಡಿಸಿದರು.ಭಾನುವಾರ ಆನವಟ್ಟಿಯಲ್ಲಿ ಹಮ್ಮಿಕೊಂಡಿದ್ದ ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್‌ ಪೇಡರೇಷನ್‌ನ ತಾಲೂಕು ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಟ್ಟಡ ಸೇರಿದಂತೆ ಸಂಘಟಿತ ಹಾಗೂ ಅಸಂಘಟಿತವಾಗಿ ಕೆಲಸ ಮಾಡುವ ಬಹುತೇಕ ಮಹಿಳೆಯರಿಗೆ ಕಾರ್ಮಿಕ ಕಾರ್ಡ್‌ ಮಾಡಿಸುವುದೇ ತಿಳಿದಿಲ್ಲ. ಸಂಸಾರದ ನೊಗ ಹೊತ್ತಿರುವ ಮಹಿಳೆಯರು ಕಡ್ಡಾಯವಾಗಿ ಕಾರ್ಮಿಕ ಕಾರ್ಡ್‌ ಮಾಡಿಸಿ, ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಪ್ರಮುಖ 28 ಕಾರ್ಮಿಕ ಕೆಲಸಗಳಲ್ಲಿ 168 ಉಪವಿಭಾಗವಾಗಿ ಕಾರ್ಮಿಕರು ನಿತ್ಯ ಕೆಲಸ ಮಾಡುತ್ತಾರೆ. ಇವರಿಗೆ ಯಾವುದೆ ಭದ್ರತೆ ಇಲ್ಲ. ಹಲವು ಕಡೆ ಜಾತಿ, ಧರ್ಮದ ವಿಚಾರವಾಗಿ ನಿಂದನೆಗೆ ಒಳಗಾಗಿ ಕೆಲಸಮಾಡುತ್ತಿದ್ದಾರೆ. ರಕ್ಷಣೆ ಹಾಗೂ ಸಾಮಾಜಿಕ ಭದ್ರತೆ ಪಡೆದುಕೊಳ್ಳಲು ಎಲ್ಲಾ ಹಂತದ ಕಾರ್ಮಿಕರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

2007ರಲ್ಲಿ ಐಎನ್‌ಟಿಯುಸಿ ಸಂಘಟನೆ ಪ್ರಾರಂಭವಾದಾಗ ಮೂರು ನೂರು ಸದಸ್ಯರು ಇದ್ದರು. ನಂತರ ಮೂರು ಸಾವಿರವಾಯಿತು. 2013ರಲ್ಲಿ ಆರು ಸಾವಿರ, ಈಗ 48 ಲಕ್ಷ ಕಾರ್ಮಿಕ ಸದಸ್ಯರು ಹೊಂದಿದೆ ಎಂದರು. ನಾವು ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆ ಹೊಂದಬೇಕು ಎಂದರು. ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಎಂ. ಯಲ್ಲಪ್ಪ, ಕಾರ್ಯದರ್ಶಿ ವಿಲ್‌ಸನ್‌, ಸಹ ಕಾರ್ಯದರ್ಶಿ ಮೌನೇಶ್ವರಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಪುಷ್ಪಾವತಿ, ಜಿಲ್ಲಾ ಕಾರ್ಯದರ್ಶಿ ಮಕ್‌ಬುಲ್‌, ಸೊರಬ ತಾಲೂಕು ಅಧ್ಯಕ್ಷ ಇ. ನಾಗರಾಜ, ಉಪಾಧ್ಯಕ್ಷರಾದ ಯಲ್ಲಪ್ಪ, ಮಾಲತೇಶ್‌, ಕೆ. ಲಿಂಗರಾಜ್‌, ಉಪಾಧ್ಯಕ್ಷೆ ಜ್ಯೋತಿ, ಖಜಾಂಚಿ ದೇವರಾಜ್‌ ಎಂ. ದೊಡ್ಡಮನಿ, ಸದಸ್ಯರಾದ ಹನುಮಂತಪ್ಪ ತಲ್ಲೂರು, ರವಿಚಂದ್ರ ಮೂಡಿ, ಚನ್ನಬಸಪ್ಪ, ವೀರೇಶ್‌, ಎಂ. ದೇವರಾಜ್‌, ಉಮೇಶ್‌ ಇದ್ದರು.