ಚನ್ನಪಟ್ಟಣ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯಸ್ವಾಮಿ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥ ಹಮ್ಮಿಕೊಂಡಿರುವ ವಿಶ್ವ ಸಂರಕ್ಷಣಾ ಮಹಾಯಜ್ಞಕ್ಕೆ ಮೇಲುಕೋಟೆಯ ಯತಿ ನಾರಾಯಣ ಜೀಯರ್ ನೇತೃತ್ವದಲ್ಲಿ ಕುಂಡಗಳಿಗೆ ಪೂಜೆ ಸಲ್ಲಿಸುವ ಮೂಲಕ ನಾಲ್ಕು ದಿನ ನಡೆಯುವ ಯಾಗಕ್ಕೆ ಚಾಲನೆ ನೀಡಲಾಯಿತು.
ಮೇ 18ರವರೆಗೆ ಮಹಾಯಜ್ಞಯಾಗ ನಡೆಯುತ್ತಿದ್ದು, ಯಾಗಕ್ಕೆಂದೆ ದೇವಸ್ಥಾನದ ಆವರಣದಲ್ಲಿ 12 ಹೋಮ ಕುಂಡಗಳನ್ನು ವಿಶೇಷವಾಗಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ದೇವಸ್ಥಾನದ ಆವರಣವನ್ನು ಭಗವಾಧ್ವಜಗಳಿಂದ ಅಲಂಕರಿಸಲಾಗಿದೆ. ಇತಿಹಾಸ ಪ್ರಸಿದ್ಧ ಕೆಂಗಲ್ ಅಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದೆ.ಮಹಾಯಜ್ಞ ಯಾಗದಲ್ಲಿ 600 ಜನ ಋತ್ವಿಜರು ಪಾಲ್ಗೊಳ್ಳಲಿದ್ದು, ಮೇಲುಕೋಟೆಯ ಯತಿ ನಾರಾಯಣ ಜೀಯರ್ ನೇತೃತ್ವದಲ್ಲಿ ಯಾಗ ನಡೆಯುತ್ತಿದೆ. ಈಗಾಗಲೇ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಉತ್ತರಪ್ರದೇಶ, ಮಧ್ಯಪ್ರದೇಶ, ವಾರಣಾಸಿ, ಗುಜರಾತ್, ಹಿಮಾಚಲ ಪ್ರದೇಶ ಹಾಗೂ ದೇಶದ ವಿವಿಧ ಕಡೆಯಿಂದ ಋತ್ವಿಜರು ಆಗಮಿಸಿದ್ದಾರೆ. ದೇಶದ ಇತಿಹಾಸದಲ್ಲಿ ಬಹುದೊಡ್ಡ ಯಜ್ಞವಾಗಿದ್ದು, ಈ ಯಾಗವನ್ನು ಮಹಾವಿಷ್ಣುವಿಗೆ ಅರ್ಪಣೆ ಮಾಡಲಾಗುವುದು.
ಯಾಗ ಕಾರ್ಯದ ಚಾಲನಾ ಕಾರ್ಯಕ್ರಮದಲ್ಲಿ ಶಾಸಕ ಯೋಗೇಶ್ವರ್ ದಂಪತಿ ಪಾಲ್ಗೊಂಡಿದ್ದರು. ಯಾಗದ ಎರಡನೇ ದಿನ ಶ್ರೀರಂಗಂ ದೇವಸ್ಥಾನದ ಮುಖ್ಯ ಗುರುಗಳ ಸಮ್ಮುಖದಲ್ಲಿ ಯಜ್ಞಯಾಗಾದಿಗಳು ಜರುಗಿದವು.ಪೋಟೊ೧೬ಸಿಪಿಟಿ೧:
ಚನ್ನಪಟ್ಟಣ ತಾಲೂಕಿನ ಶ್ರೀ ಕೆಂಗಲ್ ಆಂಜನೇಯಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ವಿಶ್ವ ಸಂರಕ್ಷಣಾ ಮಹಾಯಜ್ಞದಲ್ಲಿ ಶಾಸಕ ಯೋಗೇಶ್ವರ್ ದಂಪತಿ ಭಾಗವಹಿಸಿದ್ದರು.