ಬಂಟ್ವಾಳ: ಯಾವುದೇ ತಾರತಮ್ಯ ಅಥವಾ ಭೇದಭಾವವಿಲ್ಲದೆ ಸಮಾಜದ ಪ್ರತಿಯೊಬ್ಬರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸುವ ಅವಕಾಶ ವೈದ್ಯ ವೃತ್ತಿಯಲ್ಲಿದ್ದು, ಇದೇ ವೈದ್ಯರ ಬದುಕಿನ ನಿಜವಾದ ಸಾರ್ಥಕತೆ ಎಂದು ಸಿದ್ದಕಟ್ಟೆಯ ಅನಂತ ಪದ್ಮನಾಭ ಹೆಲ್ತ್ ಸೆಂಟರ್‌ನ ವೈದ್ಯರಾದ ರೊ. ಡಾ. ಸುದೀಪ್ ಕುಮಾರ್ ಹೇಳಿದರು.ಅವರು ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಬಂಟ್ವಾಳ ವತಿಯಿಂದ ಆಯೋಜಿಸಿದ್ದ ಗೌರವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ರೋಟರಿ ಕ್ಲಬ್ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಸೇವೆಯಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ. ಮುಂದೆಯೂ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿಯೇ ಮಾದರಿ ಕ್ಲಬ್ ಆಗಿ ಗುರುತಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಅಧ್ಯಕ್ಷೆ ರೊ. ಗೀತಾ ಬಲ್ಲಾಳ್ ಮಾತನಾಡಿ, ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ವೈದ್ಯರನ್ನು ಗೌರವಿಸುವ ಅವಕಾಶ ದೊರೆತಿರುವುದು ಸಂತಸದ ಸಂಗತಿ. ಸಮಾಜದ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಸೇವೆ ಅಮೂಲ್ಯವಾಗಿದ್ದು, ಅವರ ಸೇವೆಗೆ ನಾವೆಲ್ಲರೂ ಚಿರಋಣಿಯಾಗಿದ್ದೇವೆ ಎಂದರು.ರೋಟರಿ ಕ್ಲಬ್ ಸದಸ್ಯರಾದ ರಾಜೇಶ್ ಶೆಟ್ಟಿ ರಾಯಿ ಶೀತಲಾ, ಸುಮಿತ್ರಾ ರಾಮಚಂದ್ರ ಶೆಟ್ಟಿಗಾರ್, ಪ್ರಭಾಕರ ಪ್ರಭು ಹಾಗೂ ರಾಜೇಶ್ ಶೆಟ್ಟಿ ಕೊನೆರಬೆಟ್ಟು ಉಪಸ್ಥಿತರಿದ್ದರು. ರಮೇಶ್ ನಾಯಕ್ ರಾಯಿ ಸ್ವಾಗತಿಸಿ, ವಂದಿಸಿದರು.