ಉಡುಪಿ: ವಿಶ್ವ ಪರಿಸರ ದಿನಾಚರಣೆ 2026ರ ಅಂಗವಾಗಿ, ಇಲ್ಲಿನ ಲೋಂಬಾರ್ಡ್ ಸ್ಮಾರಕ ಆಸ್ಪತ್ರೆಯಲ್ಲಿ ಇನ್ಸ್ಪಾಯರ್ ಯೋಜನೆಯ ಸಮುದಾಯ ವಿಭಾಗದ ತಂಡವು ಇಕೋ ಕ್ಲಬ್ ಸಹಯೋಗದೊಂದಿಗೆ “ಪ್ರಕೃತಿಯಿಂದ ಪ್ರೇರಿತವಾಗಿ, ಹವಾಮಾನಕ್ಕಾಗಿ, ಭವಿಷ್ಯಕ್ಕಾಗಿ” ಎಂಬ ಜಾಗತಿಕ ಧ್ಯೇಯವಾಕ್ಯದಡಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿತು.
ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿ, ಆವರಣದ ವಿವಿಧ ಪ್ರದೇಶಗಳಿಂದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು. ಸಂಗ್ರಹಿಸಿದ ತ್ಯಾಜ್ಯ ವಸ್ತುಗಳನ್ನು ಬಳಸಿ ಸೃಜನಾತ್ಮಕವಾದ ಪ್ಲಾಸ್ಟಿಕ್ ಮರದ ಶಿಲ್ಪವನ್ನು ನಿರ್ಮಿಸಲಾಯಿತು. ಇಕೋ ಕ್ಲಬ್ ಅಧ್ಯಕ್ಷರು ಈ ಶಿಲ್ಪದ ಮಹತ್ವವನ್ನು ವಿವರಿಸಿ, ಪ್ಲಾಸ್ಟಿಕ್ ದುಷ್ಪರಿಣಾಮಗಳು ಹಾಗೂ ಸುಸ್ಥಿರ ಜೀವನಶೈಲಿಯ ಅಗತ್ಯತೆಯನ್ನು ಪ್ರತಿಬಿಂಬಿಸುವ ಸಂಕೇತವೆಂದು ತಿಳಿಸಿದರು.ಇದರ ಜೊತೆಗೆ, ಹಸಿರು ಭವಿಷ್ಯದತ್ತ ಆಶೆ, ಬೆಳವಣಿಗೆ, ಪುನರುಜ್ಜೀವನ ಹಾಗೂ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯನ್ನು ಪ್ರತಿನಿಧಿಸುವ ಸಸಿಗಳನ್ನು ನೆಡಲಾಯಿತು.ಕಾರ್ಯಕ್ರಮಕ್ಕೆ ವ್ಯವಸ್ಥಾಪಕ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಅವರ ಉಪಸ್ಥಿತರಿದ್ದ, ಗಿಡವನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಷನ್ ಆಸ್ಪತ್ರೆಯ ಚಾಪ್ಲಿನ್ ರೆ. ರೈಚಲ್ ಡಿಸಿಲ್ವಾ ಮಾತನಾಡಿ, ದೇವರಿಂದ ಸೃಷ್ಟಿಸಲ್ಪಟ್ಟ ಈ ಪ್ರಕೃತಿಯನ್ನು ಹಾಳು ಮಾಡದೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.ಈ ಕಾರ್ಯಕ್ರಮದ ಪ್ರಯುಕ್ತ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು, ಛಾಯಚಿತ್ರಗಳ ತೀರ್ಪುಗಾರರಾಗಿ ಛಾಯಾಚಿತ್ರಗಾರರಾದ ಜನಾರ್ಧನ್ ಕೊಡವೂರು ಹಾಗೂ ರಾಘವೇಂದ್ರ ಪ್ರಭು ಕರ್ವಾಲ್ ಸಹಕರಿಸಿದರು.