ಸಾರಾಂಶ
ಹರಪನಹಳ್ಳಿ: ಕೇಕೆ, ಶಿಳ್ಳೆ, ಹಲಗೆ ಶಬ್ದ, ಉಸಿರು ಬಿಗಿ ಹಿಡಿದುಕೊಂಡು ನೋಡುವ ದೃಶ್ಯ...
ಇದು ಮಾಜಿ ಶಾಸಕ ಎಂ.ಪಿ. ರವೀಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಎಂ.ಪಿ. ರವೀಂದ್ರ ಅಭಿಮಾನಿ ಬಳಗದಿಂದ ಪಟ್ಟಣದ ಸ್ಟೇಡಿಯಂನಲ್ಲಿ ಶನಿವಾರ ನಡೆದ ಕುಸ್ತಿ ಪಂದ್ಯಾವಳಿಯ ಝಲಕ್.ನೇಪಾಳ, ನವದೆಹಲಿ, ಸೊಲ್ಲಾಪುರ, ಕೊಲ್ಲಾಪುರ, ವಿಜಾಪುರ, ಸಾಂಗ್ಲಿ, ಹಳಿಯಾಳ, ಬೆಳಗಾವಿ, ಧಾರವಾಡ, ದಾವಣಗೆರೆ, ಸೇರಿದಂತೆ ರಾಜ್ಯ, ಅಂತರಾಜ್ಯ ಹಾಗೂ ವಿದೇಶದಿಂದ ಆಗಮಿಸಿದ ಕುಸ್ತಿಪಟುಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ಮನಮೋಹಕ ಪಂದ್ಯ: ನೇಪಾಳದ ದೇವತಾಪ್ ಹಾಗೂ ದೆಹಲಿಯ ಅಮಿತ್ ಪೈಲ್ವಾನಗಳ ಮಧ್ಯೆ ನಡೆದ ಕುಸ್ತಿ ಸ್ವಲ್ಪ ಹೊತ್ತು ನೆರೆದ ಸಹಸ್ರಾರು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಸಾಕಷ್ಟು ಮನೋರಂಜನೆ ನೀಡಿತು.ಬೆಳ್ಳಿಗದೆಯನ್ನು ಮಧ್ಯಪ್ರದೇಶದ ಸಂದೇಶ ಠಾಕೂರು ಅವರು ಸೊಲ್ಲಾಪುರದ ವಿಕಾಸ್ ದೋತ್ರಿ ಮೇಲೆ ಜಯಗಳಿಸಿ ತಮ್ಮದಾಗಿಸಿಕೊಂಡರು.
ಇನ್ನೊಂದು ಗದೆಯನ್ನು ದಾವಣಗೆರೆಯ ಕಿರಣ್ ಪೈಲ್ವಾನ ಅವರು ಕೊಲ್ಲಾಪುರದ ವಿಶಾಲ್ ಚಳ್ಳೆ ಅವರ ವಿರುದ್ಧ ಜಯಗಳಿಸಿ ಪಡೆದುಕೊಂಡರು.ದಾವಣಗೆರೆಯ ಬಸುಪಾಟೀಲ್, ಹರಪನಹಳ್ಳಿಯ ಸಂಜು ಹಾಗೂ ಸಾಂಗ್ಲಿಯ ಅಷ್ಟಕ್ ಮಧ್ಯೆ ಕುಸ್ತಿಗಳು ಸಹ ಕುಸ್ತಿ ಪ್ರಿಯರಿಗೆ ಮುದ ನೀಡಿದವು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಕ್ರೀಡಾ ಮನೋಭಾವನೆಯಿಂದ ಆಟ ಆಡಿ ಎಂದು ಕಿವಿಮಾತು ಹೇಳಿ ಶುಭ ಕೋರಿದರು. ಹೂವಿನಹಡಗಲಿಯ ಶಾಸಕ ಕೃಷ್ಣನಾಯ್ಕ ಅವರು ಮಾಜಿ ಶಾಸಕ ಎಂ.ಪಿ. ರವೀಂದ್ರ ಅವರು ಪಕ್ಷಾತೀತವಾಗಿ, ಜಾತ್ಯತೀತವಾಗಿ ಕೆಲಸ ಮಾಡಿದ್ದರು, ಅವರ ಹೆಸರು ಅಜರಾಮರ ಎಂದು ಹೇಳಿದರು.ಎಂ.ಪಿ. ರವೀಂದ್ರ ಪ್ರತಿಷ್ಠಾನದ ಅಧ್ಯಕ್ಷ ಗೌತಮಪ್ರಭು, ಸ್ಥಳೀಯ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ನೀಲಗುಂದ ಚೆನ್ನಬಸವ ಸ್ವಾಮೀಜಿ, ಕೂಲಹಳ್ಳಿಯ ಪಟ್ಟದ ಚಿನ್ಮಯ ಸ್ವಾಮೀಜಿ, ಪುರಸಭಾ ಸದಸ್ಯರಾದ ಎಂ.ವಿ. ಅಂಜಿನಪ್ಪ, ಉದ್ಧಾರ ಗಣೇಶ, ಲಾಟಿ ದಾದಾಪೀರ, ರೊಕ್ಕಪ್ಪ, ವಕೀಲ ಬಸವರಾಜ ಸಂಗಪ್ಪನವರ್, ಹಡಗಲಿಯ ವಾರದಗೌಸ್, ಹಾಲೇಶ, ಎಚ್.ಎಂ. ಮಹೇಶ್ವರಸ್ವಾಮಿ, ತೆಗ್ಗಿನಮಠದ ಟಿ.ಎಂ. ಶಿವಶಂಕರ, ಇಸ್ಮಾಯಿಲ್ ಎಲಿಗಾರ, ಎಲ್. ಮಂಜನಾಯ್ಕ, ಎನ್. ಶಂಕರ, ನದೀಮ ಅಕ್ರಮ, ಚಿಕ್ಕೇರಿ ಬಸಪ್ಪ, ಇರ್ಫಾನ್ ಕೂಲ್, ಸಣ್ಣ ಹಾಲಪ್ಪ, ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ , ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ನಾಗರಾಜ ಎಂ. ಕಮ್ಮಾರ, ಪಿಎಸ್ಗಳಾದ ಶುಂಭುಲಿಂಗ ಹಿರೇಮಠ, ಕಿರಣ್ ಕುಮಾರ, ರಂಗಯ್ಯ ಪಾಲ್ಗೊಂಡಿದ್ದರು.