ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಜಾತಿ ಸಮೀಕ್ಷೆಯಲ್ಲಿ ಒಕ್ಕಲಿಗ ಸಮುದಾಯದ ಎಲ್ಲರೂ ಜಾತಿ ಕಾಲಂ ಹಾಗೂ ಉಪ ಜಾತಿ ಕಲಂನಲ್ಲಿ ಕಡ್ಡಾಯವಾಗಿ ಒಕ್ಕಲಿಗ ಎಂಬುದಾಗಿ ಬರೆಸಬೇಕು ಎಂದು ನೇಗಿಲಯೋಗಿ ಸೇವಾ ಟ್ರಸ್ಟ್ ಗೌರವ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಹೇಳಿದರು.ಪಟ್ಟಣದ ನೇಗಿಲಯೋಗಿ ಸೇವಾ ಟ್ರಸ್ಟನ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿ, ಸೋಮವಾರದಿಂದ ಆರಂಭವಾದ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿ ಸಮೀಕ್ಷೆ ಅ.7ರವರೆಗೆ ನಡೆಯುತ್ತಿದೆ. ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು, ರಾಜ್ಯ ಮಟ್ಟದ ನಾಯಕರು ಸಭೆ ನಡೆಸಿ ಚರ್ಚಿಸಿದ್ದು ಸಮೀಕ್ಷೆಯ ಜಾತಿ ಕಲಂ ಹಾಗೂ ಉಪಜಾತಿ ಕಲಂನಲ್ಲಿ ಒಕ್ಕಲಿಗ ಎಂಬುದಾಗಿ ಬರೆಸಬೇಕು ಎಂದು ತಿಳಿಸಿದ್ದಾರೆ ಎಂದರು.
ಧರ್ಮದ ಕಲಂನಲ್ಲಿ ಹಿಂದೂ ಎಂಬುದಾಗಿ ಬರೆಸಬೇಕು. ನಮ್ಮ ಜಾತಿಯಲ್ಲಿ ಹಲವು ಉಪ ಜಾತಿಗಳಿಗೆ ಒಕ್ಕಲಿಗ ಎಂಬುದ ಬದಲಾಗಿ ಒಕ್ಕಲಿಗ ಎಂಬುದಾಗಿ ನಮೋದಿಸಿದರೆ ಅದು ಬೇರೆ ಜಾತಿಗೆ ಸೇರುತ್ತದೆ. ಹಾಗಾಗಿ ಕಡ್ಡಾಯವಾಗಿ ಒಕ್ಕಲಿಗ ಎಂಬುದಾಗಿಯೇ ಬರೆಸಬೇಕು ಎಂದರು.ಜಾತಿ ಸಮೀಕ್ಷೆಯಲ್ಲಿ ಜಾತಿ ನಮೋದಿಸಿದರೆ ಮೀಸಲಾತಿ ಹೆಚ್ಚಾಗುತ್ತದೆ. ಪ್ರಸ್ತುತ ಶೇ.4 ಮೀಸಲಾತಿ ಮಾತ್ರ ನಮಗೆ ಸಿಗುತ್ತಿದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಜಾತಿ ನಮೋದಿಸಿದರೆ ಹೆಚ್ಚಿನ ಮೀಸಲಾತಿ ದೊರೆಯುವ ಜತೆಗೆ ಸರ್ಕಾರ ಸೌಲಭ್ಯಗಳು ಹೆಚ್ಚಿನ ಮಟ್ಟದಲ್ಲಿ ದೊರೆಯಲಿವೆ ಎಂದರು.
ಪ್ರತಿಯೊಬ್ಬರು ಕಡ್ಡಾಯವಾಗಿ ಜಾತಿ ಕಲಂನಲ್ಲಿ ಒಕ್ಕಲಿಗ ಎಂಬುದಾಗಿ ಬರೆಸಬೇಕು. ಈ ಬಗ್ಗೆ ಜನರಿಗೆ ಸಮುದಾಯದ ಮುಖಂಡರು, ವಿದ್ಯಾವಂತರು ಜಾಗೃತಿ ಮೂಡಿಸಬೇಕು ಎಂದರು.ಈ ವೇಳೆ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಕೆ.ಕುಬೇರ, ಖಜಾಂಚಿ ಸ್ವಾಮೀಗೌಡ, ಉಪಾಧ್ಯಕ್ಷ ಸಿ.ಎಸ್.ಸುಬ್ಬೇಗೌಡ, ಮಹಿಳಾಧ್ಯಕ್ಷೆ ಮಂಜುಳ ಶಂಕರ್ನಾಗ್, ಉಪಾಧ್ಯಕ್ಷೆ ಅನಿತಾಲೋಕೇಶ್, ನಂದೀಶ್, ಶ್ರೀನಿವಾಸ್, ಸುರೇಶ್, ರವಿ, ನಾಗೇಶ್, ಬಿ.ಎಸ್.ಜಯರಾಮು, ಜನಾರ್ಧನ್ ಇದ್ದರು.