ಸಾರಾಂಶ
ಹಿರಿಯ ಸಾಹಿತಿ, ರಂಗಕರ್ಮಿ ಹಾಗೂ ವಿಮರ್ಶಕಿ ವೈ. ಕೆ. ಸಂಧ್ಯಾ ಶರ್ಮ ಅವರು 2025 ನೇ ಸಾಲಿನ ಈಶ್ವರಯ್ಯ ಅನಂತಪುರ ಅವರ ಹೆಸರಿನಲ್ಲಿ ಕೊಡಲ್ಪಡುವ ರಾಗಧನ ‘ಕಲಾ ಪ್ರವೀಣ‘ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಹಿರಿಯ ಸಾಹಿತಿ, ರಂಗಕರ್ಮಿ ಹಾಗೂ ವಿಮರ್ಶಕಿ ವೈ. ಕೆ. ಸಂಧ್ಯಾ ಶರ್ಮ ಅವರು 2025 ನೇ ಸಾಲಿನ ಈಶ್ವರಯ್ಯ ಅನಂತಪುರ ಅವರ ಹೆಸರಿನಲ್ಲಿ ಕೊಡಲ್ಪಡುವ ರಾಗಧನ ‘ಕಲಾ ಪ್ರವೀಣ‘ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಅವರು ಲೇಖಕಿ, ಕಾದಂಬರಿಕಾರ್ತಿ, ಅಂಕಣ ಬರಹಗಾರ್ತಿ, ನೃತ್ಯ ನಾಟಕಗಳ ವಿಮರ್ಶಕಿ ಮಾತ್ರವಲ್ಲ ಕೂಚಿಪುಡಿ ನೃತ್ಯ ಕಲಾವಿದೆ ಮತ್ತು ಸಂಗೀತ ವಿಮರ್ಶೆಯಲ್ಲೂ ಪಳಗಿದ್ದಾರೆ. ಕನ್ನಡ ಎಂ.ಎ. ಯಲ್ಲಿ ಡಿಸ್ಟಿಂಕ್ಷನ್ ಪಡೆದ ಇವರು, ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಅಧಿಕಾರಿಯಾಗಿ ನಿವೃತ್ತರು. 50 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಸುಮಾರು 950 ಕ್ಕೂ ಮಿಗಿಲಾದ ನಾಟಕ-ನೃತ್ಯ-ಸಂಗೀತ ವಿಮರ್ಶಾ ಲೇಖನಗಳು ಪ್ರಕಟಣೆಗೊಂಡವೆ. ಆಕಾಶವಾಣಿ ಮತ್ತು ದೂರದರ್ಶನದಲ್ಲೂ ಕಲಾವಿದೆಯಾಗಿ ಮಾನ್ಯತೆ ಪಡೆದಿರುವ ಅವರು 48 ವರ್ಷಗಳಿಂದ ತಮ್ಮದೇ ಆದ ‘ಸಂಧ್ಯಾ ಕಲಾವಿದರು’ ಹವ್ಯಾಸಿ ನಾಟಕ ತಂಡವನ್ನು, ‘ಸಂಧ್ಯಾ ಪತ್ರಿಕೆ’ ಎಂಬ ಸಾಂಸ್ಕೃತಿಕ ಅಂತರ್ಜಾಲ ಪತ್ರಿಕೆಯನ್ನೂ ಹುಟ್ಟು ಹಾಕಿ ಮುನ್ನಡೆಸುತ್ತಿದ್ದಾರೆ.‘ಕಲಾವಿಹಾರಿ’ ಅನಂತಪುರ ಈಶ್ವರಯ್ಯ ಅವರ ಹೆಸರನಲ್ಲಿ ಅವರ ಕುಟುಂಬವು ಉಡುಪಿ ರಾಗ ಧನ ಸಂಸ್ಥೆಯ ಮೂಲಕ ವರ್ಷಪ್ರತಿ ‘ಕಲಾ ಪ್ರವೀಣ’ ಪ್ರಶಸ್ತಿ ಕೊಡಮಾಡುತ್ತಿದೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಪ್ರಶಸ್ತಿ 10 ಸಾವಿರ ರು. ನಗದು ಹಾಗೂ ಪುರಸ್ಕಾರವನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭ 19ರಂದು ಸಂಜೆ 5.15ಕ್ಕೆ ಉಡುಪಿ ಪರ್ಕಳದ ಸರಿಗಮ ಭಾರತೀ ಸಭಾಂಗಣದಲ್ಲಿ ನಡೆಯಲಿದೆ.