ಕನ್ನಡಪ್ರಭ ವಾರ್ತೆ ಮಂಗಳೂರು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ ಯೋಜನೆಗಳಲ್ಲಿ ಒಂದಾದ ಯಕ್ಷಧ್ರುವ- ಯಕ್ಷಶಿಕ್ಷಣ ಯೋಜನೆಯಡಿ ಸೇವಾನಿರತರಾಗಿರುವ ಯಕ್ಷಗಾನ ಶಿಕ್ಷಕರ ಸಮಾಲೋಚನಾ ಸಭೆ ನಗರದ ಪತ್ತುಮುಡಿ ಸಭಾಂಗಣದಲ್ಲಿ ನಡೆಯಿತು.

ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ, ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ನಿರ್ದೇಶಕ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಪ್ರಸಕ್ತ ಶೈಕ್ಷಣಿಕ ವರ್ಷದ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ರೂಪುರೇಷೆಯ ಬಗ್ಗೆ ತಿಳಿಸಿದರು.

ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಸಲಹಾ ಸಮಿತಿ ಗೌರವ ಸಲಹೆಗಾರ ಪ್ರೊ.ಎಂ.ಎಲ್. ಸಾಮಗ ಪ್ರಸಕ್ತ ಕಾಲದಲ್ಲಿ ಯಕ್ಷಗಾನ ಶಿಕ್ಷಣದ ಸಾಧ್ಯತೆ ಮತ್ತು ಶೈಕ್ಷಣಿಕ ವೈಧಾನಿಕತೆಯ ಬಗ್ಗೆ ಮಾಹಿತಿ ನೀಡಿದರು. ಗೌರವ ಸಲಹೆಗಾರ ಡಾ.‌ಎಂ. ಪ್ರಭಾಕರ ಜೋಷಿ ಯಕ್ಷಗಾನ ಶಿಕ್ಷಕರ ಸವಾಲು - ಸಾಧ್ಯತೆಗಳ ಬಗ್ಗೆ ತಿಳಿಸಿದರು.

ಯಕ್ಷಧ್ರುವ ದಶಮ ಪಟ್ಲ ಸಂಭ್ರಮದಲ್ಲಿ ಬಿಡುಗಡೆಯಾದ ‘ಯಕ್ಷಧ್ರುವ ಯಕ್ಷಶಿಕ್ಷಣ- ತೆಂಕುತಿಟ್ಟು ಯಕ್ಷಗಾನ ಶಿಕ್ಷಣ ತಂತ್ರಜ್ಞಾನಾಧಾರಿತ ಪಠ್ಯ ಪುಸ್ತಕ’ವನ್ನು ಯಕ್ಷಗಾನ ಶಿಕ್ಷಕರಿಗೆ ವಿತರಿಸಲಾಯಿತು. ಬಳಿಕ ಯಕ್ಷಧ್ರುವ- ಯಕ್ಷಶಿಕ್ಷಣ ಯೋಜನೆಯ ನೀತಿ ಸಂಹಿತೆಯನ್ನು ತಿಳಿಸುವ ಜತೆಗೆ ಯಕ್ಷಗಾನ ಶಿಕ್ಷಕರೊಡನೆ ಸಂವಾದ ಏರ್ಪಡಿಸಲಾಯಿತು. ಯೋಜನೆಯ ಸಲಹಾ ಸಮಿತಿ ಸದಸ್ಯ ಸರಪಾಡಿ ಅಶೋಕ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಮಂಬೈ ಘಟಕದ ಸಂಚಾಲಕ ಕರ್ನೂರು ಮೋಹನ್ ರೈ, ಯಕ್ಷಗಾನ ಸಂಘಟಕ ರಮೇಶ್ ಮಂಜೇಶ್ವರ, ಪತ್ರಕರ್ತ ನಗರ ರಾಘವೇಂದ್ರ ಸೇರಿದಂತೆ 36 ಯಕ್ಷಗಾನ ಶಿಕ್ಷಕರು ಇದ್ದರು.


ಯೋಜನೆಯ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ ಸ್ವಾಗತಿಸಿ, ವಂದಿಸಿದರು. ಸಂಯೋಜಕ ದೀವಿತ್ ಎಸ್.ಕೆ‌. ಪೆರಾಡಿ ನಿರ್ವಹಿಸಿದರು.