ಸಾರಾಂಶ
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಯಕ್ಷಮಂಗಳ ಪ್ರಶಸ್ತಿ’ ಪ್ರದಾನ
ಕನ್ನಡಪ್ರಭ ವಾರ್ತೆ ಉಳ್ಳಾಲಯಕ್ಷಗಾನ ಸುಯೋಗವೆಂದರೆ ಎಂಜಿನಿಯರ್, ಡಾಕ್ಟರ್, ಶಿಕ್ಷಕರು ಮೊದಲಾದ ವಿವಿಧ ಕ್ಷೇತ್ರಗಳ ಆಸಕ್ತರ ಮೂಲಕ ಸಮೃದ್ಧವಾಗಿ ಬೆಳೆಯುತ್ತಿದೆ. ವಿದ್ಯಾವಂತರು ಸೃಜನಶೀಲತೆಗೆ ಒತ್ತು ಕೊಡುವಂತೆ ಪರಂಪರೆಯನ್ನೂ ಉಳಿಸಿಕೊಳ್ಳಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.ಮಂಗಳೂರು ವಿವಿಯ ಡಾ.ಯು.ಆರ್ ರಾವ್ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಡಾ.ಬನಾರಿ, ಪ್ರೊ.ಸಾಮಗ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ 2024-25ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಹಾಗೂ ಅಶೋಕ ಹಾಸ್ಯಗಾರ ಅವರ ದಶರೂಪಕಗಳ ದಶಾವತಾರ ಕೃತಿಗೆ ಕೃತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಅಭಿನಂದನ ಭಾಷಣ ಮಾಡಿದ ಪ್ರೊ.ಕೆ ಚಿನ್ನಪ್ಪ ಗೌಡ ಅವರು ಡಾ.ರಮಾನಂದ ಬನಾರಿ ಮತ್ತು ಪ್ರೊ.ಎಂ.ಎಲ್ ಸಾಮಗ ಅವರು ಯಕ್ಷಗಾನದ ಅಧ್ಯಯನ ಮತ್ತು ವಿಸ್ತರಣೆಗೆ ಕೊಡುಗೆ ನೀಡಿದ್ದಾರೆ. ಬಣ್ಣದ ಮಾಲಿಂಗರ ಬಣ್ಣದ ವೇಷದ ಸೌಂದರ್ಯವನ್ನು ವರ್ತಮಾನದಲ್ಲಿ ಸೃಜನಶೀಲತೆಯೊಂದಿಗೆ ತಂದ ಕಲಾವಿದರು ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಎಂದರು. ಅಶೋಕ ಹಾಸ್ಯಗಾರರ ದಶರೂಪಕಗಳ ದಶಾವತಾರ ಕೃತಿ ಯಕ್ಷಗಾನವನ್ನು ಶಾಸ್ತ್ರೀಯ ಚೌಕಟ್ಟಿನಲ್ಲಿ ನೋಡುವ ಪ್ರಯತ್ನ ಎಂದರು. ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಮಾತನಾಡಿದರು. ವಿ.ವಿ. ಕುಲಪತಿ ಪ್ರೊ.ಪಿ.ಎಲ್ ಧರ್ಮ ಅಧ್ಯಕ್ಷತೆ ವಹಿಸಿದ್ದರು.ಯಕ್ಷಗಾನ ಗುರು ದೀವಿತ್ ಕೋಟ್ಯಾನ್ ಹಾಗೂ ಯಕ್ಷಮಂಗಳ ವಿದ್ಯಾರ್ಥಿನಿ ಕಾವ್ಯ ಹಂದೆ ಪ್ರಶಸ್ತಿ ಪತ್ರ ವಾಚಿಸಿದರು.ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ಸತೀಶ್ ಕೊಣಾಜೆ ವಂದಿಸಿದರು. ಯಕ್ಷಮಂಗಳ ವಿದ್ಯಾರ್ಥಿನಿ ಸಾಯಿಸುಮ ನಾವಡ ನಿರೂಪಿಸಿದರು.ಯಕ್ಷ ನಿರೂಪಣೆ ಮತ್ತು ಗಣಪತಿ ಕೌತುಕಇಡೀ ಕಾರ್ಯಕ್ರಮವನ್ನು ಕಲಾವಿದೆ ಸಾಯಿಸುಮ ನಾವಡ ಯಕ್ಷಗಾನದ ಅರ್ಥಗಾರಿಕೆ ಶೈಲಿಯಲ್ಲಿ ನಿರೂಪಣೆ ನಡೆಸಿದ್ದು ವಿಶೇಷ ಗಮನ ಸೆಳೆಯಿತು. ಕಾರ್ಯಕ್ರಮದ ಉದ್ದಕ್ಕೂ ನಡುನಡುವೆ ಯಕ್ಷಗಾನದ ಹಾಡುಗಳನ್ನು, ದೀವಿತ್ ಶ್ರೀಧರ ಕೋಟ್ಯಾನ್ ರಚಿಸಿದ ಅಭಿನಂದನಾ ಗೀತೆಯನ್ನು ಗಾಯಕ ಮನ್ವಿತ್ ಇರಾ ಹಾಡಿದರು. ಹಿಮ್ಮೇಳದಲ್ಲಿ ಕೌಶಿಕ್ ಪುತ್ತಿಗೆ, ಸ್ಕಂದ ಕೊನ್ನಾರ್ ಮತ್ತು ಹರಿಶ್ಚಂದ್ರ ನಾಯ್ಕ ಸಹಕರಿಸಿದ್ದರು.ಯಕ್ಷಮಂಗಳ ತಂಡಗಳಾದ ವಿದ್ಯಾರ್ಥಿಗಳಾದ ಶ್ರೇಯಸ್, ಮಹೇಶ್ ಶೆಟ್ಟಿ, ಸುವರ್ಣ ಅವರಿಂದ ಪೂರ್ವರಂಗದ ಭಾಗವಾದ ಗಣಪತಿ ಕೌತುಕ ಪ್ರಸ್ತುತಪಡಿಸಲಾಯಿತು.ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರರು ಅನಾರೋಗ್ಯ ನಿಮಿತ್ತ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.