ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ - ಮಂಗಳೂರಿನಲ್ಲಿ ಪ್ರಾರಂಭವಾಗುವ ಸ್ಟಾರ್ಟ್ಅಪ್ ಕಂಪನಿಗಳ ಬೆಳವಣಿಗೆಗೆ ಅನುಕೂಲಕರ ನಿಯಮ ರೂಪಿಸಿ ಕೇಂದ್ರ ಬಜೆಟ್ನಲ್ಲಿ ಅವಕಾಶ ಕಲ್ಪಿಸುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು.ಉಡುಪಿ-ಮಂಗಳೂರು ಭಾಗದಲ್ಲಿ 25ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳ ಮೂಲಕ 15,000ಕ್ಕೂ ಅಧಿಕ ಎಂಜಿನಿಯರುಗಳನ್ನು 150ಕ್ಕೂ ಹೆಚ್ಚು ಪದವಿ ಕಾಲೇಜುಗಳ ಮೂಲಕ 40,000ಕ್ಕೂ ಅಧಿಕ ಪದವೀಧರರನ್ನು ಪ್ರತಿ ವರ್ಷ ಉದ್ಯೋಗ ಕ್ಷೇತ್ರಕ್ಕೆ ಒದಗಿಸುತ್ತಿದೆ. 15ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಹಾಗೂ 15ಕ್ಕೂ ಅಧಿಕ ಇನ್ಕ್ಯುಬೇಷನ್ ಸೆಂಟರ್ಗಳು ಕಾರ್ಯಾಚರಿಸುತ್ತಿವೆ.ಉಡುಪಿ ಮತ್ತು ಮಂಗಳೂರು ಉತ್ತಮ ಶಿಕ್ಷಣ ವ್ಯವಸ್ಥೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಕರಾವಳಿ ಪ್ರದೇಶವು ಸ್ಟಾರ್ಟ್ ಅಪ್ಗಳಿಗೆ ಪೂರಕವಾಗಿ ಬೆಳೆದು ಬರುತ್ತಿದ್ದು, ಉಡುಪಿಯ ರೋಬೋ ಸಾಫ್ಟ್ ಟೆಕ್ನಾಲಜೀಸ್ ಹಾಗೂ ನಿವೀಸ್ ಸೊಲ್ಯೂಷನ್ಸ್ ಮೊದಲಾದ ಹಲವು ಕಂಪನಿಗಳು ಗಮನಾರ್ಹ ಪ್ರಗತಿ ಸಾಧಿಸಿವೆ. ಉಡುಪಿ-ಮಂಗಳೂರು ಭಾಗದ ಸ್ಟಾರ್ಟ್ ಅಪ್ ಕಂಪನಿಗಳಿಗೆ ಉತ್ತೇಜನ ನೀಡಲು ಬಜೆಟ್ನಲ್ಲಿ ಸೂಕ್ತ ಅವಕಾಶ ಕಲ್ಪಿಸಿ ಈ ಭಾಗದ ಸ್ಟಾರ್ಟ್ಅಪ್ಗಳಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಡುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ.ಈ ಸಂದರ್ಭ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.