ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸದ ಮಾಹಿತಿಯು ಜಿಲ್ಲೆಯ ಲೋಕಸಭಾ ಸದಸ್ಯರಿಗೆ, ರಾಜ್ಯಸಭಾ ಸದಸ್ಯರಿಗೆ, ಎಲ್ಲ ಶಾಸಕರಿಗೆ ಮತ್ತು ವಿವಿಧ ಇಲಾಖೆಯ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಹೋಗುತ್ತದೆ. ಇಲ್ಲಿನ ಶಾಸಕರು ಜನಪರ ಕಾಳಜಿಯುಳ್ಳವರಾಗಿದ್ದರೇ ಸಚಿವರೊಂದಿಗೆ ಪ್ರಾಕೃತಿಕ ವಿಕೋಪ ಪೀಡಿತ ಪ್ರದೇಶಕ್ಕೆ ಹೋಗಿ ಸಮಸ್ಯೆಯ ಬಗ್ಗೆ ಚರ್ಚಿಸಿ ಗರಿಷ್ಠ ಪರಿಹಾರ ದೊರಕಿ‌ಸಿಕೊಡುವಲ್ಲಿ ಪ್ರಯತ್ನಿಸಬಹುದಾಗಿತ್ತು ಎಂದು ರಮೇಶ್ ಕಾಂಚನ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಉಡುಪಿ ಜಿಲ್ಲೆಯ ಕಡಲತೀರದ ವಿವಿಧ ಭಾಗಗಳಲ್ಲಿ ಆಗಿರುವ ಕಡಲ್ಕೊರೆತ ಹಾಗೂ ಕೃಷಿ ಹಾನಿಯ ಬಗ್ಗೆ ವೀಕ್ಷಣೆ ನಡೆಸಿ ನಷ್ಟದ ಬಗ್ಗೆ ವರದಿ ನೀಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಈ ಬಗ್ಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೀಡಿರುವ ಬಾಲಿಶತನದ ಹೇಳಿಕೆಯಿಂದ ಅವರೊಬ್ಬ ಅಪ್ರಬುದ್ಧ ಶಾಸಕ ಎಂಬುದು ಸಾಬೀತಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸದ ಮಾಹಿತಿಯು ಜಿಲ್ಲೆಯ ಲೋಕಸಭಾ ಸದಸ್ಯರಿಗೆ, ರಾಜ್ಯಸಭಾ ಸದಸ್ಯರಿಗೆ, ಎಲ್ಲ ಶಾಸಕರಿಗೆ ಮತ್ತು ವಿವಿಧ ಇಲಾಖೆಯ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಹೋಗುತ್ತದೆ. ಇಲ್ಲಿನ ಶಾಸಕರು ಜನಪರ ಕಾಳಜಿಯುಳ್ಳವರಾಗಿದ್ದರೇ ಸಚಿವರೊಂದಿಗೆ ಪ್ರಾಕೃತಿಕ ವಿಕೋಪ ಪೀಡಿತ ಪ್ರದೇಶಕ್ಕೆ ಹೋಗಿ ಸಮಸ್ಯೆಯ ಬಗ್ಗೆ ಚರ್ಚಿಸಿ ಗರಿಷ್ಠ ಪರಿಹಾರ ದೊರಕಿ‌ಸಿಕೊಡುವಲ್ಲಿ ಪ್ರಯತ್ನಿಸಬಹುದಾಗಿತ್ತು.

ಜನಸೇವೆಯ ಹೆಸರಿನಲ್ಲಿ ಪ್ರಚಾರ, ಕಾಟಚಾರ ಹಾಗೂ ಭಾವನಾತ್ಮಕ ವಿಚಾರಗಳೊಂದಿಗೆ ಜನರನ್ನು ಉದ್ರೇಕಿಸುವುದನ್ನು ಚಾಳಿಯಾಗಿಸಿಕೊಂಡು ಈ ಯಶ್ಪಾಲ್ ಸುವರ್ಣ‌ರವರು ಶಾಸಕ ಸ್ಥಾನದ ಗೌರವವನ್ನು ಮರೆತು ಪುಂಡು ಪೋಕರಿಗಳ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ. ಉಡುಪಿಯ ಜನರಿಗಾಗಿ ಉತ್ತಮ ಕೆಲಸ ಮಾಡಿ ಮಾದರಿಯಾಗಿ, ಅದು ಬಿಟ್ಟು ಇಂತಹ ಹಗುರವಾದ ಮಾತುಗಳನ್ನು ಆಡದಿರಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.