ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಪ್ರಾಚೀನ ಶಾಸನ ಇರುವುದು ಯಲ್ಲಾಪುರದಲ್ಲಿ. ಯಶಪುರ, ಯಶೋಪುರ ಎಂದು ಐತಿಹಾಸಿಕವಾಗಿ ಕರೆಸಿಕೊಂಡ ಯಲ್ಲಾಪುರ ಧಾರ್ಮಿಕ, ಸಾಂಸ್ಕೃತಿಕವಾಗಿ ಗಟ್ಟಿಯಾದ ನೆಲೆ, ಸ್ಥಾನ ಹೊಂದಿದೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಪ್ರಾಚೀನ ಶಾಸನ ಇರುವುದು ಯಲ್ಲಾಪುರದಲ್ಲಿ. ಯಶಪುರ, ಯಶೋಪುರ ಎಂದು ಐತಿಹಾಸಿಕವಾಗಿ ಕರೆಸಿಕೊಂಡ ಯಲ್ಲಾಪುರ ಧಾರ್ಮಿಕ, ಸಾಂಸ್ಕೃತಿಕವಾಗಿ ಗಟ್ಟಿಯಾದ ನೆಲೆ, ಸ್ಥಾನ ಹೊಂದಿದೆ ಎಂದು ಇತಿಹಾಸಕಾರ ಲಕ್ಷ್ಮೀಶ ಹೆಗಡೆ ಸೋಂದಾ ಹೇಳಿದರು.

ಪಟ್ಟಣದ ಕಾಳಮ್ಮನಗರದ ಶಿವಶಂಕರ ಸಭಾಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಪುಸ್ತಕ ಅವಲೋಖನ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಂಪ್ಲಿ ಶಾಸನ ಪುರಾತನವಾದದ್ದು. ಸರಿಯಬ್ಬರಸಿ ರಾಣಿಯ ಕಿರವತ್ತಿಯ ಶಾಸನ, ಶಾನವಳ್ಳಿಯ ಅಡಕೆತೋಟದ ವರ್ಣನೆಯ ಶಾಸನಗಳು ಪ್ರಮುಖವಾಗಿವೆ. ಪ್ರಾದೇಶಿಕ ಇತಿಹಾಸದ ಬಗ್ಗೆ ಮಾಹಿತಿ ಇರಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆರ್.ಡಿ‌. ಜನಾರ್ದನ ಮಾತನಾಡಿ, ಸಾಹಿತ್ಯ ಸಶಕ್ತ ರಚನೆ ಜೋತೆಗೆ ಗೋಷ್ಠಿಯಲ್ಲಿ ಪರಿಣಾಮಕಾರಿ ಅಭಿವ್ಯಕ್ತಿಯೂ ಅಷ್ಟೇ ಪರಿಣಾಮಕಾರಿಯಾಗಿ ಹೊಮ್ಮಿದಾಗ ಮಾತ್ರ ಭಾವನೆಯ ತೀವ್ರತೆ ಜನರನ್ನು ತಲುಪಲು ಸಾಧ್ಯ ಎಂದರು.

ಸಾಹಿತಿ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಸಂಬಂಧಗಳು ಹಳಹಳಿಸುತ್ತಿರುವ ಸಂದರ್ಭದಲ್ಲಿ ಸಾಹಿತ್ಯದ ಮೂಲಕ ಸಂಬಂಧಗಳನ್ನು ಜೋಡಿಸುವ ಕೆಲಸ ಆಗಬೇಕು ಎಂದರು.

ಸಂಘದ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ಅಧ್ಯಕ್ಷತೆ ವಹಿಸಿದ್ದರು.

ಸಾಹಿತ್ಯ ವೇದಿಕೆ ಅಧ್ಯಕ್ಷ ಮಂಜುನಾಥ ಪಟಗಾರ ಭಾಗವಹಿಸಿದ್ದರು. ಇದೇ ಸಂದರ್ಭ ಸಾಹಿತಿ ನವೀನಕುಮಾರ ಎ.ಜೆ. ಅವರ ಪುಸ್ತಕವನ್ನು ಶಿಕ್ಷಕಿ ಪವಿತ್ರಾ ಆಗೇರ ಅವಲೋಕಿಸಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಶ್ರೀರಂಗ ಕಟ್ಟಿ, ಸುಬ್ರಾಯ ಗಾಂವ್ಕಾರ ಬಿದ್ರೆಮನೆ, ಮಧುಕೇಶ ಭಾಗ್ವತ್, ತ್ರೇಶಾ‌ ನೋಹಾ, ದಿಲೀಪ ದೊಡ್ಮನಿ, ಶರೀಫ ಹಾರ್ಸಿಕಟ್ಟಾ, ದತ್ತಾತ್ರಯ ಕಣ್ಣಿಪಾಲ, ರಾಧಾ ಭಟ್ಟ, ವೀರವ್ವ ಪೂಜಾರಿ, ಸುಚೇತಾ ಮದ್ಗುಣಿ, ಕೃಷ್ಣ ನಾಯಕನಕೆರೆ, ವಿನೋದ ಐಗಳ, ರವಿ ಕುಮಾರ, ಸಂಗೀತಾ ಲಮಾಣಿ, ಪಾರ್ವತಿ ಕಟ್ಟಿಮನೆ, ಸತೀಶ ಶೆಟ್ಟಿ, ಆಶಾ ಶೆಟ್ಟಿ, ರವಿ ಶೇಷಗಿರಿ ಕವಿತೆ ವಾಚಿಸಿದರು.

ಸುನಂದಾ ಪಾಟಣಕರ್ ಸ್ವಾಗತಿಸಿದರು. ರಾಘವೇಂದ್ರ ಪಟಗಾರ ನಿರೂಪಿಸಿದರು. ಶಿಕ್ಷಣ ಸಂಯೋಜಕ ಸುಧಾಕರ ನಾಯಕ ವಂದಿಸಿದರು.