ಸಾರಾಂಶ
ಯುವ ಜನತೆಗೆ ಯೋಗದ ಮಹತ್ವ ತಿಳಿಯಬೇಕು. ಯೋಗವು ಆಧುನಿಕ ಜೀವನದಲ್ಲಿ ಮಾನವನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡಲು ಸಂಪೂರ್ಣವಾಗಿ ಸಹಕಾರಿಯಾಗಿದೆ.
ಹಾವೇರಿ: ನಗರದ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಜೆಸಿಐ ಹಾವೇರಿ ಘಟಕ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ಈ ವೇಳೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಬಿ.ಎಂ. ಬೇವಿನಮರದ ಮಾತನಾಡಿ, ಇಂದಿನ ಯುವ ಜನತೆಗೆ ಯೋಗದ ಮಹತ್ವ ತಿಳಿಯಬೇಕು. ಯೋಗವು ಆಧುನಿಕ ಜೀವನದಲ್ಲಿ ಮಾನವನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡಲು ಸಂಪೂರ್ಣವಾಗಿ ಸಹಕಾರಿಯಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜೆಸಿಐ ಹಾವೇರಿ ಘಟಕದ ಅಧ್ಯಕ್ಷ ದತ್ತಾತ್ರೇಯ ಜೋಶಿ ಮಾತನಾಡಿ, ಯೋಗವು ಆರೋಗ್ಯ ಮತ್ತು ಜೀವನ ಶೈಲಿಗೆ ಬಹಳ ಮುಖ್ಯ. ಇದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಯೋಗಾಭ್ಯಾಸ ಒತ್ತಡ ಕಡಿಮೆ ಮಾಡಲು, ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು.
ಜೆಸಿಐ ಹಾವೇರಿ ಘಟಕದ ವಲಯ ತರಬೇತಿದಾರ ನಾಗರಾಜ ದಶಮನಿ ಅವರು ಕಾರಾಗೃಹದಲ್ಲಿರುವ ಎಲ್ಲರಿಗೂ ಯೋಗವನ್ನು ಪ್ರತಿದಿನ ಮಾಡುವುದರಿಂದ ಆರೋಗ್ಯದಲ್ಲಾಗುವ ಪ್ರಯೋಜನಗಳ ಕುರಿತು ವಿವರವಾಗಿ ತಿಳಿಸಿದರು.ಜೆಸಿಐ ಹಾವೇರಿ ಘಟಕದ ನಿಕಟಪೂರ್ವ ಅಧ್ಯಕ್ಷ ವೀರಯ್ಯ ಪ್ರಸಾದಿಮಠ, ನಿರ್ದೇಶಕ ಪ್ರಮೋದ ನವಲೆ, ಕಾರಾಗೃಹದ ಅಧಿಕಾರಿ ಬಿ.ಯು. ಕಿಲಾರಿ, ಎಂ.ವೈ. ದೊಡ್ಡಮನಿ, ಬಿ.ಎಸ್. ನಾಲಕುರವಿ, ಸಹಾಯಕ ಜೈಲರ್ಗಳು ಪಾಲ್ಗೊಂಡಿದ್ದರು. ಇಂದು ಉಚಿತ ನೇತ್ರ ತಪಾಸಣಾ ಶಿಬಿರ
ರಾಣಿಬೆನ್ನೂರು: ಶಿವಮೊಗ್ಗದ ಶ್ರೀಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ, ಸ್ಥಳೀಯ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಂಧತ್ವ ನಿವಾರಣಾ ಸಂಸ್ಥೆ, ಜಿಲ್ಲಾ ನೇತ್ರ ಸಂಚಾರಿ ಘಟಕ, ಎನ್.ಎಸ್. ಸ್ನೇಹಜ್ಯೋತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಜೂ. 30ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರವನ್ನು ನಗರದ ಹೊರವಲಯದ ಅಡವಿ ಆಂಜನೇಯ ಬಡಾವಣೆ ಶಾಲೆ ನಂ. 3ರಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.