ಸಾರಾಂಶ
ಯೋಗ ಕಾರ್ಯಕ್ರಮ
ಚನ್ನರಾಯಪಟ್ಟಣ: ಮಾನವನ ನಿತ್ಯದ ಒತ್ತಡದ ಜೀವನಕ್ಕೆ ಯೋಗಾಸನ ಔಷಧಿ ಇದ್ದಂತೆ. ಈಗಿನ ಆಹಾರ ವಿಚಾರ ಬದುಕು ಕ್ರಮಬದ್ಧತೆ ಕೊರತೆ ಉತ್ತಮ ಜೀವನಕ್ಕೆ ಕೊರತೆ ತರುವಂತಾಗಿದೆ ಎಂದು ಪಟ್ಟಣದ ಚಾಮುಂಡಿಹಳ್ಳಿ ಗೇಟಿನ ಸರ್ಕಾರಿ ಆಯುರ್ವೇದ ವೈದ್ಯರಾದ ಡಾ.ವೈ.ಕೆ.ತ್ರಿವೇಣಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆರಾಧ್ಯ ವಿದ್ಯಾರ್ಥಿ ಬಳಗದವರು ಏರ್ಪಡಿಸಿದ್ದ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾತ್ರಿ ಬೇಗ ಮಲಗಿ ಬೇಗ ಎದ್ದು ದಿನಚರಿ ಎಂದು ಸಾತ್ವಿಕ ಆಹಾರ ನಡೆ ನುಡಿಯಿಂದ ಪಾಲಿಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವತ್ರಿಕವಾಗಿ ಒತ್ತಡದಿಂದ ಕೋಪ, ನಿರುತ್ಸಾಹ, ಹೃದಯ ರೋಗ, ಮಧುಮೇಹ, ರಕ್ತದೊತ್ತಡ, ಗ್ಯಾಸ್ಟ್ರಿಕ್, ನರಗಳ ದೌರ್ಬಲ್ಯಗಳಂತಹ ಹಲವಾರು ರೋಗಗಳಿಂದ ಬಳಲುವಂತಾಗಿದ್ದು ಮನಸ್ಸಿನ ಋಣಾತ್ಮಕ ಗುಣಗಳನ್ನು ಹೊರಹಾಕಿ ಧನಾತ್ಮಕ ಭಾವನೆ ಲಭಿಸಲು ಕ್ರಮಬದ್ದತೆಯ ಆಹಾರ ಮತ್ತು ವ್ಯವಹಾರ ಮಾಡಲು ಶಿಸ್ತು, ಬದ್ಧತೆಯ ಉಲ್ಲಾಸ ಜೀವನಕ್ಕೆ ಯೋಗ ಬಹಳ ಶಕ್ತಿಯುತವಾದದ್ದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ರೂವಾರಿ ಹಾಗೂ ಯೋಗ ಶಾಲೆಯ ಗುರು ಚಂದ್ರಶೇಖರ್ ಮಾತನಾಡಿ, ‘ಸರ್ವೇ ಜನ ಸುಖಿನೌ ಭವಂತು’ ಎಂಬ ತತ್ವದಲ್ಲಿ ನನ್ನ ಸಾತ್ವಿಕ ನಡೆ ನುಡಿ ಎಂದು ಕರ್ತವ್ಯವನ್ನು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿದ್ದೇನೆ. ಯೋಗ ಶಕ್ತಿ ಎಲ್ಲರಿಗೂ ಪ್ರಯೋಜನವಾಗಲಿ ಎಂದು ಹೇಳಿದರು.ಆರಾಧ್ಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ಪುಟ್ಟಣ್ಣ ಗೋಕಾಕ್ ಮಾತನಾಡಿ, ದುಡ್ಡೇ ದೊಡ್ಡಪ್ಪ, ಯೋಗ ಅವರಪ್ಪ. ಯೋಗದಿಂದ ಆರೋಗ್ಯ, ಇದರಿಂದ ಜೀವನ ಶ್ರೇಷ್ಠ ಜೇಷ್ಠತೆಯನ್ನು ಹೊಂದಿರುತ್ತದೆ. ಪ್ರಪಂಚದಲ್ಲಿ ನಡೆಯುವ ಎಲ್ಲಾ ದಿನಾಚರಣೆಗಳಿಗಿಂತ ಪ್ರಧಾನ, ಪ್ರಾಮುಖ್ಯತೆ ಹೊಂದಿದೆ. ಯೋಗ ಯಾವುದೇ ದಿನಾಚರಣೆ ಮಾಡಬೇಕಾದರೆ ಮಾನಸಿಕ ಹಾಗೂ ದೈಹಿಕ ಸದೃಢತೆಬೇಕು. ಇದಕ್ಕೆ ಪೂರಕ ಶಕ್ತಿಯನ್ನು ಯೋಗ ಒದಗಿಸುತ್ತದೆ ಎಂದರು.