ಸಾರಾಂಶ
ಪ್ರತಿಯೊಬ್ಬರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಾಗ ಹೆಚ್ಚು ಜ್ಞಾನ ಪಡೆಯಲು ಸಾಧ್ಯ.
ನನ್ನ ಊರು- ನನ್ನ ಹೆಮ್ಮೆ ಗ್ರಂಥ ಬಿಡುಗಡೆ, ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಯಲಬುರ್ಗಾಪ್ರತಿಯೊಬ್ಬರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಾಗ ಹೆಚ್ಚು ಜ್ಞಾನ ಪಡೆಯಲು ಸಾಧ್ಯ ಎಂದು ಯಲಬುರ್ಗಾದ ಶ್ರೀಧರ ಮುರುಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಸಮಿತಿ ಸಹಯೋಗದಲ್ಲಿ ನಿವೃತ್ತ ಪ್ರಾಧ್ಯಾಪಕ ಆರ್.ಎಲ್. ಪಾಟೀಲ ಬರೆದ ನನ್ನ ಊರು- ನನ್ನ ಹೆಮ್ಮೆ ಗ್ರಂಥ ಬಿಡುಗಡೆ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕಗಳನ್ನು ಓದುವುದರಿಂದ ಮನಸ್ಸಿಗೆ ಸಿಗುವ ಸಂತೃಪ್ತಿ ಬೇರೊಂದಿಲ್ಲ ಎಂದರು.ಯುವಕರು ಪುಸ್ತಕಗಳ ಅಧ್ಯಯನದಿಂದ ದೂರ ಸರಿಯುತ್ತಿರುವುದರಿಂದ ಅಕ್ಷರ ಜ್ಞಾನದ ಕೊರತೆ, ನೆನೆಪಿನ ಶಕ್ತಿ ಕಳೆದುಕೊಂಡು ಅವರು ಭವಿಷ್ಯದಲ್ಲಿ ಸಾಕಷ್ಟು ಕಷ್ಟ ಅನುಭವಿಸುವಂತಾಗುತ್ತದೆ. ಪುಸ್ತಕಗಳು ಮನುಷ್ಯನ ಬದುಕಿಗೆ ಆಸರೆಯಾಗಿವೆ ಎಂದು ಹೇಳಿದರು.
ಲೇಖಕ ಆರ್.ಎಲ್. ಪೋಲಿಸಪಾಟೀಲ ಮಾತನಾಡಿ, ಹಣ, ಆಸ್ತಿ, ಬಂಗಾರ ಬೆಳ್ಳಿಯನ್ನು ಯಾರಾದರೂ ಖದಿಯಬಹುದು. ಆದರೆ ಪುಸ್ತಕಗಳಿದ್ದರೆ ಯಾರು ಖದಿಯಲಾರರು ಅದುವೇ ನಮ್ಮ ಬದುಕಿನ ಬಹುದೊಡ್ಡ ಆಸ್ತಿ ಇದ್ದಂತೆ ಎಂದರು.ನಿವೃತ್ತ ಶಿಕ್ಷಕ ಸಂಗಪ್ಪ ಖಾಜಗಾರ ಆಶಯ ನುಡಿಗಳನ್ನಾಡಿದರು. ಮುಂಡರಗಿ ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚೆಣ್ಣವರ ಮಾತನಾಡಿದರು. ಕಸಾಪ ಅಧ್ಯಕ್ಷ ಬಾಲದಂಡಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಕವಿಗೋಷ್ಠಿ ಜರುಗಿತು.
ಅತಿಥಿಗಳಾಗಿ ಗ್ರಾಪಂ ಸದಸ್ಯರಾದ ಗೀತಾ ತುಪ್ಪದ, ಶರಣಮ್ಮ ವಡ್ಡರ, ನಿಂಗನಗೌಡ ಹೊಸಳ್ಳಿ, ಕಾಳಪ್ಪ ಬಡಿಗೇರ, ಎಸ್.ವಿ. ಧರಣಾ, ಎ.ಎಲ್. ಪೋಲಿಸಪಾಟೀಲ, ಪಪಂ ಸದಸ್ಯರಾದ ರೇವಣೆಪ್ಪ ಹಿರೇಕುರಬರ, ಕಳಕಪ್ಪ ತಳವಾರ, ಯಲ್ಲಪ್ಪ ಹಡಗಲಿ, ಹಂಚ್ಯಾಳಪ್ಪ ಪೂಜಾರ, ಎಂ.ಎಸ್. ರೊಡ್ಡಿನ, ಶೇಖರಗೌಡ ಮಾಲಿಪಾಟೀಲ, ಶೇಖರ ಗುರಾಣಿ, ವೀರಣ್ಣ ನಿಂಗೋಜಿ, ರಾಮಣ್ಣ ತಳವಾರ, ಶಿವಮೂರ್ತಿ ಇಟಗಿ, ಶ್ರೀಕಾಂತಗೌಡ ಮಾಲಿಪಾಟೀಲ ಮತ್ತಿತರರು ಇದ್ದರು.ಉಪನ್ಯಾಸಕ ಹೇಮಂತ ದಳವಾಯಿ ನಿರೂಪಿಸಿ, ರಾಘವೇಂದ್ರ ಗೋನಾಳ ವಂದಿಸಿದರು.