ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಓರ್ವ ರೈತನ ಮಗನಾಗಿ ಹುಟ್ಟಿ, ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ ಐದು ಬಾರಿ ಸಂಸದನಾಗಿ ಕೆಲಸ ಮಾಡಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಕಾರಣ ಎಂದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಲ್ಪತರು ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡಿದ್ದ ತುಮಕೂರು ಸಾಂಸ್ಕೃತಿಕ ಹಬ್ಬದ ಮುಕ್ತಾಯ ಸಮಾರಂಭದಲ್ಲಿ ನಾಗರಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಳೆದ 60 ವರ್ಷಗಳಿಂದ ರಾಜಕಾರಣದಲ್ಲಿ ಕೆಲಸ ಮಾಡುತ್ತಿದ್ದೇನೆ. ತಾಲೂಕು ಬೋರ್ಡ್ ಮೆಂಬರ್ ಆಗಿ ರಾಜಕೀಯ ಪ್ರವೇಶಿಸಿ, ಐದು ಬಾರಿ ಸಂಸದನಾಗಿ ಕೆಲಸ ಮಾಡಿದ್ದೇನೆ. ಇದರ ಹಿಂದೆ ತುಮಕೂರು ಜಿಲ್ಲೆಯ ಎಲ್ಲಾ ಮತದಾರರ ಆಶೀರ್ವಾದ ಇದೆ.ಅವರ ಮಡಿಲಲ್ಲಿ ಇಟ್ಟು ನನ್ನನ್ನು ಬೆಳೆಸಿದ್ದೀರಿ ಎಂದರು.ಐದು ಬಾರಿ ಸಂಸದನಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಸುಮಾರು ೭೫ ಸಾವಿರ ಕೋಟಿ ರು.ಗಳಿಗೂ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿಪಡಿಸಿದ್ದೇನೆ. ಇನ್ನೆರಡು ತಿಂಗಳು ನನ್ನ ಅಧಿಕಾರವಿದೆ. ರಾಜಕೀಯ ನಿವೃತ್ತಿ ನಂತರ ನಿಮ್ಮೊಂದಿಗೆ ಸೇರಿ ಹೋರಾಟದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು. ಜಿಲ್ಲಾ ಸಾಂಸ್ಕೃತಿಕ ಹಬ್ಬದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸ್ಪೂರ್ತಿ ಚಿದಾನಂದ್, ಕನ್ನಡ ಪರ ಹೋರಾಟಗಾರರು ಒಗ್ಗೂಡಿ ಇಂತಹ ಒಂದು ಕಾರ್ಯಕ್ರಮ ಆಯೋಜಿಸುವ ಮೂಲಕ ಇಷ್ಟೊಂದು ಸಾಂಸ್ಕೃತಿಕ ಮನಸ್ಸುಗಳು ಒಂದೆಡೆ ಸೇರಲು ಸಹಕಾರಿಯಾಗಿದ್ದಾರೆ. ಅವರು ನಿಜಕ್ಕೂ ಅಭಿನಂದನಾರ್ಹರು. ಇದೇ ಕಾರ್ಯಕ್ರಮದಲ್ಲಿ ಸುಮಾರು ೫೦ಕ್ಕೂ ಹೆಚ್ಚು ವರ್ಷಗಳ ಕಾಲ ರಾಜಕಾರಣಿಯಾಗಿ ಹಲವಾರು ಯೋಜನೆಗಳನ್ನು ತುಮಕೂರಿಗೆ ತಂದು ಜಿಲ್ಲೆಯ ಅಭಿವೃದ್ಧಿಯಲ್ಲಿ ಶ್ರಮಿಸಿರುವ ಮುತ್ಸದ್ಧಿ ರಾಜಕಾರಣಿ, ಸಂಸದ ಜಿ.ಎಸ್. ಬಸವರಾಜು ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದಿಸುತ್ತಿರುವುದು ಸುತ್ಯಾರ್ಹವಾಗಿದೆ. ಇದೊಂದು ಮಾದರಿ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ನಾನು ಕೂಡ ನಿಮ್ಮ ಸೇವೆಗೆ ಅಣಿಯಾಗಲಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದರು.
ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪರಮೇಶ್ ಮಾತನಾಡಿ, ಕನ್ನಡ ನೆಲ.ಜಲ,ಭಾಷೆಯ ಬಗ್ಗೆ ನಿರಂತರವಾಗಿ ಹೋರಾಟದಲ್ಲಿ ತೊಡಗಿರುವ ಕನ್ನಡ ಸಂಘಟನೆಗಳು ಒಗ್ಗೂಡಿ ಇಂತಹದೊಂದು ಕಾರ್ಯಕ್ರಮ ಆಯೋಜಿಸಿ, ಒಳ್ಳೆಯ ಮನರಂಜನಾ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಐವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆಯೂ ಇಲ್ಲದೆ ಕೆಲಸ ಮಾಡಿದ ಬಸವರಾಜು ಅವರನ್ನು ಸನ್ಮಾನಿಸುವ ಮೂಲಕ ಅವರ ಸಾಧನಾ ಕಾರ್ಯಗಳನ್ನು ಮೆಲುಕು ಹಾಕುವ ಕೆಲಸ ಮಾಡಿದ್ದು ಸಂತೋಷದ ವಿಷಯವಾಗಿದೆ. ಮುಂದೆಯೂ ಇಂತಹ ಕಾರ್ಯಕ್ರಮಗಳು ನಡೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.ಕಾರ್ಯಕ್ರಮದ ಆಯೋಜಕ ಎಚ್.ಎನ್. ದೀಪಕ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಕಳೆದ ೫೦ ವರ್ಷಗಳಿಂದ ಹಗಲಿರುಳು ಕೆಲಸ ಮಾಡಿದ ಸಂಸದರಿಂದ ಎಚ್.ಎ.ಎಲ್, ಸ್ಮಾರ್ಟ್ ಸಿಟಿ, ವಸಂತ ನರಸಾಪುರ ಕೈಗಾರಿಕಾ ಪ್ರದೇಶಗಳಂತಹ ಇನ್ನೂ ಹಲವರು ಕಾರ್ಯಕ್ರಮಗಳು ಜನಮಾನಸದಲ್ಲಿವೆ. ಅಲ್ಲದೆ ಜಿಲ್ಲೆಯ ಜನತೆಗೆ ಉಪಯೋಗವಾಗಲಿವೆ. ಈಗಾಗಲೇ ರಾಜಕೀಯ ನಿವೃತ್ತಿಯ ಮನಸ್ಸು ಮಾಡಿರುವ ಅವರನ್ನು ನಾಗರಿಕರ ಪರವಾಗಿ ಕಲ್ಪತರು ಸಾಂಸ್ಕೃತಿಕ ವೇದಿಕೆ ಅಭಿನಂದಿಸುತ್ತಿದೆ ಎಂದರು.
ವೇದಿಕೆಯಲ್ಲಿ ಪಿ.ಎನ್. ಕೃಷ್ಣಮೂರ್ತಿ,ಎಂ.ಡಿ. ಲಕ್ಷ್ಮೀನಾರಾಯಣ್, ವಿದ್ಯಾವಾಹಿನಿ ಪ್ರದೀಪ್, ವಿಶ್ವಾಸ ಜ್ಯೂವೆರ್ಸ್ ಮಾಲೀಕ ವಿಶ್ವಾಸ, ಕರಣ್ಟೆಕ್ಸ್ಟೈಲ್ ಎಸ್. ಕರಣ್ಕುಮಾರ್, ಬದ್ರಿನಾಥ್, ಆಯೋಜಕ, ವಿಜಯಸೇನೆ ರಾಜ್ಯಾಧ್ಯಕ್ಷ ಎಚ್.ಎನ್. ದೀಪಕ್, ರಾಜ್ಯ ಗೌರವ ಸಲಹೆಗಾರ ಡಾ.ಎಂ. ಸುದೀಪ್ಕುಮಾರ್, ವಿಜಯಸೇನೆ ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್. ಶಂಕರ್, ಕನ್ನಡ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ತುನುಜ್ ಕುಮಾರ್, ವಿಜಯಸೇನೆ ರಾಜ್ಯ ಕಾರ್ಯದರ್ಶಿ ರಂಜನ್.ಆರ್. ಮತ್ತಿತರರು ಉಪಸ್ಥಿತರಿದ್ದರು.