ಕನ್ನಡಪ್ರಭ ವಾರ್ತೆ ಗುಬ್ಬಿ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದ ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡ ಘಟನೆ ತಾಲೂಕಿನಎಸ್.ಪುರ ಹೋಬಳಿ ಅಂಕಳಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ. ನಾರಾಯಣಸ್ವಾಮಿ (25) ಸಾವಿಗೆ ಶರಣಾದ ರ್ದುದೈವಿ. ಅಂಕಲಕೊಪ್ಪ ಗ್ರಾಮದ ಬೆಟ್ಟಸ್ವಾಮಿ ಅವರ ಮಗ ನಾರಾಯಣಸ್ವಾಮಿ ಪದವಿ ಪಡೆದು ಉದ್ಯೋಗ ಅರಸಿ ತುಮಕೂರು ನಗರಕ್ಕೆ ಹೋಗಿ ಡಿಲೆವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಐಪಿಎಲ್‌ ವೇಳೆ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಸುಳಿಗೆ ಸಿಲುಕಿದ್ದಾನೆ. ಬಡತನದ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಯುವಕನ ಸಾವಿನಿಂದ ಕುಟುಂಬಕ್ಕೆ ಶಾಕ್ ಆಗಿದೆ. ಗ್ರಾಮದಲ್ಲಿ ಒಳ್ಳೆಯ ಹುಡುಗ ಎಂದೆನಿಸಿದ್ದ ನಾರಾಯಣಸ್ವಾಮಿ ಸಾವಿಗೆ ಗ್ರಾಮವೇ ಮಮ್ಮಲ ಮರುಗುತ್ತಿದೆ. ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ ಮಾಜಿ ಶಾಸಕ ಮಸಾಲಾ ಜಯರಾಂ ಸುದ್ದಿಗಾರರೊಂದಿಗೆ ಮಾತನಾಡಿ, ಆನ್ ಲೈನ್ ಆಟಗಳು, ಕ್ರಿಕೆಟ್ ಬೆಟ್ಟಿಂಗ್ ದಂಧೆಗಳು ವಿದ್ಯಾರ್ಥಿಗಳು ಹಾಗೂ ಯುವಕರನ್ನು ಬಲಿ ಪಡೆಯುತ್ತಿದೆ. ಬಡವರ ಮಕ್ಕಳು ಹೆಚ್ಚು ಬಲಿಯಾಗಿದ್ದಾರೆ. ಯುವಕ ಆತ್ಮಹತ್ಯೆಗೆ ಶರಣಾಗಿದ್ದು ತೀರಾ ನೋವಿನ ಸಂಗತಿ. ಇಂತಹ ಅನಾಹುತಕ್ಕೆ ಸರ್ಕಾರ ಹೊಣೆ ಹೊತ್ತು ಕೂಡಲೇ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕು. ಆನ್ ಲೈನ್ ಗೇಮ್ ಗಳಿಗೂ ಬ್ರೇಕ್ ಹಾಕಬೇಕು ಎಂದು ಆಗ್ರಹಿಸಿದರು.