ಸಾರಾಂಶ
ಶಾಸಕ ಟಿ. ಬಿ. ಜಯಚಂದ್ರ ಅವರು, ಕ್ರೀಡಾಂಗಣ ನಿರ್ಮಾಣ ಮಾಡಿಸುವುದರ ಜೊತೆಗೆ , ತುಮಕೂರು ದಾವಣಗೆರೆ ರೈಲ್ವೇ ಮಾರ್ಗ ಯೋಜನೆಗೆ ಹೆಚ್ಚು ಒತ್ತು ನೀಡಿ ಕೆಲಸ ನಿರ್ವಹಿಸುತ್ತಿರುವುದು ಶಿರಾ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತದೆ ಎಂಬುದನ್ನು ಸಾಕ್ಷೀಕರಿಸುತ್ತದೆ.
ಕನ್ನಡಪ್ರಭ ವಾರ್ತೆ ಶಿರಾ
ಗ್ರಾಮೀಣ ಪ್ರದೇಶದ ಯುವಕರು ನಮ್ಮ ಸಾಂಸ್ಕೃತಿಕ ಪರಂಪರೆಯ ಕ್ರೀಡೆ ಕಬಡ್ಡಿಯಲ್ಲಿ ಹೆಚ್ಚು ಆಸಕ್ತಿ ವಹಿಸುವ ಮೂಲಕ ಗ್ರಾಮೀಣ ಸೊಗಡಿನ ಕ್ರೀಡೆಯನ್ನು ಉತ್ತೇಜಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಆರ್. ಶಶಿಧರ ಗೌಡ ಹೇಳಿದರು.ತಾವರೆಕೆರೆ ಗ್ರಾಮದ ಶ್ರೀ ಬಂಡಿ ರಂಗನಾಥ ಸ್ವಾಮಿ ದೇವಸ್ಥಾನ ಮುಂಭಾಗ ವಾಗ್ಮಿನಿ ಸ್ಪೋರ್ಟ್ಸ್ ಅಸೋಸಿಯೇಶನ್ ಹಾಗೂ ತಾವರೆಕೆರೆ ಗ್ರಾಪಂ ಸಹಯೋಗದೊಂದಿಗೆ ನಡೆದ ಪುರುಷರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಶಿರಾ ನಗರದ ಹೊರವಲಯದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಪರಿಶೀಲನೆ ನಡೆದಿದ್ದು, ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾದರೆ ಶಿರಾ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲಿದೆ. ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ. ಬಿ. ಜಯಚಂದ್ರ ಅವರು, ಕ್ರೀಡಾಂಗಣ ನಿರ್ಮಾಣ ಮಾಡಿಸುವುದರ ಜೊತೆಗೆ , ತುಮಕೂರು ದಾವಣಗೆರೆ ರೈಲ್ವೇ ಮಾರ್ಗ ಯೋಜನೆಗೆ ಹೆಚ್ಚು ಒತ್ತು ನೀಡಿ ಕೆಲಸ ನಿರ್ವಹಿಸುತ್ತಿರುವುದು ಶಿರಾ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತದೆ ಎಂಬುದನ್ನು ಸಾಕ್ಷೀಕರಿಸುತ್ತದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದರು.
ಕಬ್ಬಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಮುಖಂಡ ಧ್ರುವ ರಾಮಾಂಜಿ, ತಾವರೆಕೆರೆ ವ್ಯಾಪ್ತಿಯ ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ವಹಿಸಿ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದರು.ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಯ 12 ತಂಡಗಳು ಪಾಲ್ಗೊಂಡಿದ್ದವು.
ತಾವರೆಕೆರೆ ಗ್ರಾಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ತಿಮ್ಮಣ್ಣ, ಮಾಜಿ ಉಪಾಧ್ಯಕ್ಷ ಶಿವು ಸ್ನೇಹಪ್ರಿಯ, ಎಪಿಎಂಸಿ ಅಧ್ಯಕ್ಷ ರಾಜಣ್ಣ, ಮಾಜಿ ಅಧ್ಯಕ್ಷ ಯಶೋಧರ ಗೌಡ, ಆರ್. ಜೆ. ಶಿವಕುಮಾರ್, ಗ್ರಾಪಂ ಸದಸ್ಯರಾದ ಶಿವಕುಮಾರ್ ನಾಯಕ್, ಶಿವಣ್ಣ, ರಾಜು, ಶಿಕ್ಷಕಿ ರಾಣಿ ಸೇರಿ ಹಲವಾರು ಮುಖಂಡರು ಉಪಸ್ಥಿತರಿದ್ದರು.