ಯುವಜನರು ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು

ಹನುಮಸಾಗರ: ಮರಗಳಿಗೆ ಯಾವುದೇ ಜಾತಿ, ಧರ್ಮ ಅಥವಾ ಬೇಧಭಾವ ಇರುವುದಿಲ್ಲ. ಅವು ಎಲ್ಲರಿಗೂ ಸಮಾನವಾಗಿ ನೆರಳು, ಗಾಳಿ ಮತ್ತು ಜೀವ ನೀಡುತ್ತವೆ. ಅದೇ ರೀತಿ ಸಮಾಜದಲ್ಲೂ ಸೌಹಾರ್ದತೆ, ಸಹಬಾಳ್ವೆ ಮತ್ತು ಭಾವೈಕ್ಯತೆ ಬೆಳೆಯಬೇಕು ಎಂದು ಹಜರತ್ ಮಹ್ಮದ್ ರಾಶೀದ ಖಾಜಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬದ ಅಂಗವಾಗಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಯೂಥ್ ಫೌಂಡೆಶನ್, ಅಂಜುಮನ್ ಇಸ್ಲಾಂ ಸಮಿತಿಯಿಂದ ಹಜರತ್ ಹಸೇನ್ ಹಾಗೂ ಹಜರತ್ ಹುಸೇನ್ ಸವಿನೆನಪಿಗಾಗಿ ಸಸಿ ನಡೆಯುವ ಮೂಲಕ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದರು.

ಅಂಜುಮನ್ ಇಸ್ಲಾಂ ಕಮೀಟಿ ಉಪಾಧ್ಯಕ್ಷ ಅಬ್ದುಲ್ ರಜಾಕ್ ಟೇಲರ ಮಾತನಾಡಿ, ಯುವಜನರು ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಮೊಹರಂ ಹಬ್ಬದ ಸಂದರ್ಭದಲ್ಲಿ ಸಸಿ ನೆಡುವುದು ಸಮಾಜಕ್ಕೆ ಉತ್ತಮ ಮಾದರಿಯಾಗಿದೆ ಒಂದು ಸಸಿ ನೆಡುವುದು ಎಂದರೆ ಕೇವಲ ಒಂದು ಮರ ಬೆಳೆಸುವುದಲ್ಲ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆಯಾಗಿ ನೀಡಿದಂತಾಗುತ್ತದೆ. ಪ್ರತಿಯೊಬ್ಬರೂ ವರ್ಷಕ್ಕೊಂದು ಸಸಿ ನೆಟ್ಟು ಅದರ ಜವಾಬ್ದಾರಿ ವಹಿಸಬೇಕು ಎಂದರು.

ತಂಜೀಮ್ ಇಸ್ಲಾಂ ಕಮೀಟಿ ಅಧ್ಯಕ್ಷ ನಜೀರಸಾಬ್‌ ಮೆಣೇದಾಳ, ಅಬ್ದುಲ್ ರಜಾಕ್‌, ಮಹ್ಮದ್ ರಾಶೀದ ಖಾಜಿ, ಮೌಲಾನ ಇರ್ಷಾದ್ ರಜ್ವಿ, ಮುನೀರ್ ಅಹ್ಮದ್ ಖಾದ್ರಿ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಖಾದರಸಾಬ್‌ ತಹಸೀಲ್ದಾರ, ಉಪಾಧ್ಯಕ್ಷ ಅಬ್ದುಲ್ ರಜಾಕ್ ಟೇಲರ್, ಮೈಬುಸಾಬ್‌, ಫೌಂಡೇಶನ್ ಅಧ್ಯಕ್ಷ ದಾದೇಪೀರ ಕಟಗಿ, ಅಬ್ದುಲ್ ರಜಾಕ ಗಿರಣಿ, ಸದ್ದಾಂ ತಹಸೀಲ್ದಾರ, ಸುಲೇಮಾನ ಮುದಗಲ, ಹುಜೇರ ಪಾಷಾ, ಸಾಧಿಕ, ಗುಲಾಮ್ ನಬಿ ದೋಟಿಹಾಳ, ಸೊಹೇಲ ದೋಟಿಹಾಳ, ಹುಸೇನಸಾಬ ಕಟಗಿ, ಮಹ್ಮದ ಕಟಗಿ, ಮೈನು ಕಟಗಿ, ಇಲಿಯಾಸ ಮನಿಯಾರ, ನೂರಸಾಬ ಮೂಲಿಮನಿ ಇತರರು ಇದ್ದರು.