ಸಾರಾಂಶ
ಕನ್ನಡಪ್ರಭವಾರ್ತೆ ತೀರ್ಥಹಳ್ಳಿಚುನಾವಣೆ ಇಲ್ಲದ ಸಮಯದಲ್ಲೂ ಭಾರತೀಯ ಜನತಾಪಕ್ಷದ ತತ್ವಸಿದ್ದಾಂತವನ್ನು ಒಪ್ಪಿ ಯುವಕರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಪಕ್ಷದ ಸಂಘಟನೆಗೆ ಪೂರಕವಾಗಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಬಸವಾನಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶ್ರೀದೀಪ್ರನ್ನು ಸೋಮವಾರ ಪಟ್ಟಣದ ಪಕ್ಷದ ಕಛೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಶಾಸಕರು, ಪ್ರದಾನಿ ನರೇಂದ್ರ ಮೋದಿಯವರ ನಾಯಕತ್ವದ ಬಗ್ಗೆ ದೇಶವ್ಯಾಪಿ ಯುವಕರಲ್ಲಿ ವಿಶೇಷ ಒಲವು ವ್ಯಕ್ತವಾಗುತ್ತಿದೆ. ಭಾರತೀಯ ಜನತಾಪಕ್ಷದ ತತ್ವಸಿದ್ದಾಂತದ ಬಗ್ಗೆ ಯುವಕರಲ್ಲಿ ಹೆಚ್ಚಿನ ಒಲವು ವ್ಯಕ್ತವಾಗುತ್ತಿರುವುದು ಗಮನಾರ್ಹವಾಗಿದೆ ಎಂದರು.ಬಿಜೆಪಿಗೆ ಸೇರ್ಪಡೆಗೊಂಡ ಶ್ರೀದೀಪ್ ಮಾತನಾಡಿ, ನನ್ನ ಆತ್ಮಿಯರೂ ಮತ್ತು ಹಿತೈಷಿಗಳ ಸಲಹೆಯಂತೆ ಬಿಜೆಪಿ ಪಕ್ಷದ ಸಿದ್ದಾಂತವನ್ನು ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು.7 ಸದಸ್ಯ ಬಲದ ಬಸವಾನಿ ಗ್ರಾಮ ಪಂಚಾಯ್ತಿಯಲ್ಲಿ ಕಾಂಗ್ರೆಸ್ 4 ಬಿಜೆಪಿ 3 ಸದಸ್ಯರು ಇದ್ದಾರೆ. 4 ಸದಸ್ಯರ ಬೆಂಬಲದೊಂದಿಗೆ ಗ್ರಾಪಂ ಆಡಳಿತ ಕಾಂಗ್ರೆಸ್ ವಶದಲ್ಲಿದ್ದು ಇದೀಗ ಉಪಾಧ್ಯಕ್ಷರಾಗಿದ್ದ ಶ್ರೀದೀಪ್ ರಾಜೀನಾಮೆಯಿಂದಾಗಿ ಬಿಜೆಪಿ ಸದಸ್ಯರ ಸಂಖ್ಯೆ 4 ಕ್ಕೆ ಏರಿದ್ದು ಕಾಂಗ್ರೆಸ್ ಬಹುಮತ ಕಳೆದುಕೊಂಡಿದೆ. ಗ್ರಾಪಂ ಆಡಳಿತದ ಅವಧಿ ಕೆಲವೇ ತಿಂಗಳುಗಳು ಉಳಿದಿದ್ದು ಮುಂದಿನ ರಾಜಕೀಯ ಬದಲಾವಣೆಯನ್ನು ಕಾದು ನೋಡಬೇಕಿದೆ.