ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರುಆದುನಿಕ ಕಾಲಘಟ್ಟದ ಪ್ರಸ್ತುತ ಬದಲಾದ ದಿನಗಳಲ್ಲಿ ಯುವಕರು ಬಸವಾದಿ ಶಿವಶರಣ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿದರೆ ನವ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ತಾಲೂಕಿನ ಸಿದ್ದಯ್ಯನಕೋಟೆಯಲ್ಲಿ ಚಿತ್ತರಗಿ ವಿಜಯ ಮಹಂತೇಶ್ವರ ಶಾಖಾಮಠದಲ್ಲಿ ನಡೆಯುತ್ತಿರುವ ಕಾಯಕಯೋಗಿ ಮ.ನಿ.ಪ್ರ.ಬಸವಲಿಂಗ ಸ್ವಾಮೀಜಿ ಪಟ್ಟಾಧಿಕಾರ ರಜತ ಮಹೋತ್ಸವದ ಯುವಜನ ಗೋಷ್ಠಿಯಲ್ಲಿ ಮಾತನಾಡಿದರು.12 ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಿದ್ದ ಬಸವಣ್ಣ ಜಾತ್ಯತೀತ ನವಸಮಾಜ ನಿರ್ಮಾಣಕ್ಕೆ ಅವಿರಥ ಹೋರಾಟ ನಡೆಸಿದ್ದರು. ಈ ಹೊತ್ತಿಗೆ ಜಾತಿ ರಹಿತ, ವರ್ಣ ರಹಿತ ಸಮಾಜವನ್ನು ಕಟ್ಟಿದ್ದ ಬಸವಣ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಮಹಾಂತ ಸ್ವಾಮೀಜಿಯವರ ದಿಟ್ಟ ನಿರ್ಧಾರದಿಂದ ಪ್ರಾರಂಭವಾದ ಸಿದ್ದಯ್ಯನಕೋಟೆ ಶ್ರೀ ಮಠವು ಬಸವಲಿಂಗ ಶ್ರೀಗಳ ಶ್ರಮದಿಂದಾಗಿ ರಾಜ್ಯಮಟ್ಟಕ್ಕೆ ಹೆಸರಾಗಿದೆ. ಮಠದ ಶ್ರೀಗಳು ಶ್ರಮಜೀವಿಗಳು 25 ವರ್ಷಗಳಿಂದ ಸದಾ ಕಾಯಕ ಮಾಡುತ್ತಲೇ ಮಠದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ ಎಂದರು.ಗಂಗಾವತಿಯ ಡಾ.ರಾಜಶೇಖರ ನಾರನಾಳ್ ಮಾತನಾಡಿ, ವರ್ಗ, ವರ್ಣ, ಲಿಂಗ ಬೇಧ ಎನ್ನದೆ ಸಮಾನತೆಗಳ ಪ್ರಜಾಪ್ರಭುತ್ವದ ಸಂಸತ್ತನ್ನು ಅನುಭವ ಮಂಟಪದ ಮೂಲಕ 12 ಶತಮಾನದಲ್ಲಿಯೇ ರೂಪಿಸಿದ್ದ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ ಎಂದರು.ಯುವ ಮುಖಂಡ ರಾಯಾಪುರ ದೊಡ್ಡ ಓಬಯ್ಯ ಮಾತನಾಡಿ, ಸಾಮಾಜಿಕ ಬದಲಾವಣೆಗೆ ಹೋರಾಡಿದ ಸಮಾಜ ಸುದಾರಕ ಬಸವಣ್ಣನ ಸಂದೇಶವನ್ನು ಗಡಿ ಭಾಗದ ಜನರಿಗೆ ಸಾರುತ್ತಾ ಈ ಭಾಗದ ಜನರಿಗೆ ನಿಜದನಿಯ ಕಾಯಕ ಯೋಗಿಗಳಾಗಿದ್ದಾರೆ.ಶಾಲೆಗಳನ್ನು ತೆರೆದು ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ.ಬಸಲಿಂಗ ಶ್ರೀಗಳು ಸದಾ ಕಾಯಕ ಯೋಗಿ ಯಾಗಿ ಕೆಲಸ ಮಾಡುತ್ತಾ ಶ್ರೀ ಮಠವನ್ನು ಅಭಿವೃದ್ಧಿಗೊಳಿಸಿ ರಾಜ್ಯಕ್ಕೆ ಪರಿಚಯಿಸಿ ತಾಲೂಕಿನ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಂದರ್ಭದಲ್ಲಿ ಅಥಣಿಯ ಮೋಟಗಿ ಮಠದ ಶ್ರೀ ಚನ್ನಬಸಪ್ಪ ಮಹಾ ಸ್ವಾಮೀಜಿ, ಚಿತ್ತರಗಿ ವಿಜಯ ಮಹಂತೇಶ್ವರ ಸಂಸ್ಥಾನ ಮಠದ ಮ.ನಿ.ಪ್ರ.ಗುರು ಮಹಾಂತ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಸಮಾಜ ಸೇವಕಿ ಜೀವರತ್ನಮ್ಮ, ಚಿತ್ರ ನಿರ್ದೇಶಕ ಜಿ.ಶ್ರೀನಿವಾಸಮೂರ್ತಿ, ಕಾಂಗ್ರೆಸ್ ಮುಖಂಡರಾದ ಬೋಸಯ್ಯ, ಭಕ್ತ ಪ್ರಹ್ಲಾದ್, ಕಲಾವಿದರ ಕಲ್ಯಾಣ ವೇದಿಕೆಯ ಅಧ್ಯಕ್ಷ ಜಿ.ಪಿ.ಸುರೇಶ, ಕೆ.ಬಸಣ್ಣ, ಶ್ರೀ ಮಠದ ಕಾರ್ಯದರ್ಶಿ ಪಿ.ಆರ್.ಕಾಂತರಾಜ್ ಇದ್ದರು.