ಕುಷ್ಟಗಿ: ಸಮಾಜದಲ್ಲಿ ನೊಂದವರ ಸೇವೆ ಮಾಡಲು ಯುವಕರು ಮುಂದೆ ಬರಬೇಕು ಎಂದು ಬಳ್ಳಾರಿ ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ ಹೇಳಿದರು.
ತಾಲೂಕಿನ ತಾವರಗೇರಾ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಅಭಿಯೋಜನೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಾಯದೊಂದಿಗೆ ನಡೆದ ನೊಂದವರಿಗೆ ನ್ಯಾಯ ಎಂಬ ಜಾಗೃತಿ ಯೋಜನೆ ಅಡಿ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಂಡು ಬರುತ್ತಿದ್ದು, ದುಶ್ಚಟ ತ್ಯಜಿಸುವ ಜತೆಗೆ ಸಮಾಜದಲ್ಲಿ ನೊಂದಿರುವ ಜೀವಿಗಳಿಗೆ ಸಹಾಯಹಸ್ತ ನೀಡಬೇಕು ಎಂದರು.ಯುವಕರು ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳು, ಸಮಾಜದಲ್ಲಿ ನಡೆಯುವ ಅನ್ಯಾಯ ಸರಿಪಡಿಸುವಲ್ಲಿ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ನಮ್ಮ ಯುವ ಆತ್ಮಾವಲೋಕನ ಮಾಡಿಕೊಂಡು ಅಪರಾಧ ಪ್ರಕರಣಗಳು ಹೆಚ್ಚಾಗದಂತೆ ಜಾಗೃತಿ ವಹಿಸಲು ಯುವಕರು ಮುಂದೆ ಬರಬೇಕು ಎಂದ ಅವರು, ಸದೃಢ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಬೇಕು ಎಂದರು.
ಸರ್ಕಾರ ಹಲವಾರು ಅಭಿಯಾನ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಇತ್ತೀಚಿಗೆ ಗಾಂಜಾದಂತ ಮಾದಕ ದ್ರವ್ಯಗಳ ಚಟಕ್ಕೆ ಯುವಕರು ಬಲಿಯಾಗುತ್ತಿರುವುದು ಕಂಡುಬರುತ್ತಿದ್ದು, ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಿ ಅಪರಾಧ ನಡೆಯದಂತೆ ಜಾಗೃತಿ ವಹಿಸಬೇಕು. ಜಾರಿಗೆ ತಂದಿರುವ ಸರ್ಕಾರಿ ಯೋಜನೆ ಸದುಪಯೋಗಪಡಿಸಿಕೊಂಡು ಜೀವನ ಸುಧಾರಿಸುವ ಕೆಲಸ ಮಾಡಬೇಕು ಎಂದರು.ಗಂಗಾವತಿ ಡಿವೈಎಸ್ಪಿ ನ್ಯಾಮಗೌಡ ಮಾತನಾಡಿ, ಪಟ್ಟಣದಲ್ಲಿ ಸಿಸಿ ಕ್ಯಾಮೆರಾ ಹಾಗೂ ಪಾದಚಾರಿಯಲ್ಲಿರುವ ಅಂಗಡಿ ತೆರವುಗೊಳಿಸುವಲ್ಲಿ ಪಪಂ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕ್ರೈಂ ಸಿಪಿಐ ಆಂಜನೇಯಪ್ಪ, ಸ್ಥಳೀಯ ಪಿಎಸ್ಐ ಚಂದ್ರಪ್ಪ ಎಚ್. ಇದ್ದರು.