ನೆಲಮಂಗಲ: ಯುವಜನತೆ ಮೊಬೈಲ್‌, ಸೋಶಿಯಲ್‌ ಮೀಡಿಯಾಗಳಿಂದ ಹೊರಬಂದು ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಶಾಸಕ ಎನ್.ಶ್ರೀನಿವಾಸ್‌ ಅಭಿಪ್ರಾಯಪಟ್ಟರು.

ಬೆಂಗಳೂರು ಉತ್ತರ ತಾಲೂಕಿನ ಹುಣ್ಣಿಗೆರೆ ಗ್ರಾಮದಲ್ಲಿ ಯುವರತ್ನ ಕ್ರಿಕೆಟ್‌ ತಂಡ ಆಯೋಜಿಸಿದ್ದ ಯುವರತ್ನ ಕಪ್ 2ನೇ ದಿನದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ನಗರದ ಪ್ರದೇಶಕ್ಕೆ ಹೊಂದಿಕೊಂಡಿರುವ ಉತ್ತರ, ದಕ್ಷಿಣ ತಾಲೂಕುಗಳಲ್ಲಿ ಭೂಮಿಯ ಬೆಲೆ ಗಗನೆಕ್ಕೇರಿದೆ. ಸರ್ಕಾರಿ ಜಾಗ ಲಭ್ಯವಿಲ್ಲದಂತಾಗಿದೆ. ಬಡವರಿಗೆ ಆಶ್ರಯ ಯೋಜನೆಯಡಿ ನಿವೇಶನ ನೀಡಲು ಸಾಧ್ಯವಿಲ್ಲ. ಈ ಕಾರಣದಿಂದಲೇ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಸರ್ಕಾರದಿಂದ ಗುಂಪು ಅಥವಾ ಮಹಡಿಮನೆ(ಅಪಾರ್ಟ್ಮೆಂಟ್)ರೀತಿಯಲ್ಲಿ ಮನೆಗಳನ್ನು ನಿರ್ಮಿಸಿ ಕ್ಷೇತ್ರದ ಬಡಜನರಿಗೆ ನೆರವಾಗಿದ್ದಾರೆ. ಗ್ರಾಮೀಣ ಭಾಗದಲ್ಲಿರುವ ಕ್ರೀಡಾಪಟುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವೇದಿಕೆಯನ್ನು ಕಲ್ಪಿಸಿರುವ ಯುವರತ್ನ ಕ್ರಿಕೆಟ್‌ ತಂಡದ ಕೆಲಸ ಶ್ಲಾಘನೀಯ ಎಂದರು.

ಬಹುಮಾನ ಪಡೆದ ತಂಡಗಳು: ಸೊಂಡೆಕೊಪ್ಪಗ್ರಾಪಂ ವ್ಯಾಪ್ತಿಯ ೮ ಕ್ರಿಕೆಟ್ ತಂಡಗಳಿಗೆ ಮಾತ್ರ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಅದರಲ್ಲಿ ಅಂತಿಮವಾಗಿ ಸೊಂಡೆಕೊಪ್ಪ ಕದಂಬ ಕ್ರಿಕೆಟರ್ಸ್‌ ತಂಡ ಪ್ರಥಮ ಬಹುಮಾನವಾಗಿ 1.55.55 ನಗದು, ಆಕರ್ಷಕ ಟ್ರೋಪಿ ಪಡೆದುಕೊಂಡರೆ, ದ್ವಿತೀಯ ಬಹುಮಾನವಾಗಿ ಹುಲ್ಲೆಗೌಡನಹಳ್ಳಿ ಎಚ್.ಜಿ.ಕ್ರಿಕೆಟ್‌ ತಂಡ 55.555 ನಗದು, ಆಕರ್ಷಕ ಟ್ರೋಫಿ, ತೃತೀಯ ಬಹುಮಾನವಾಗಿ ಬೈರೇಗೌಡನಹಳ್ಳಿ ಎಸ್.ಕೆ.ಬಿ ಶರಣ್ಯ ಚಾಲರ್ಸ್ ತಂಡ 33,555 ನಗದು, ಟ್ರೋಪಿ ಪಡೆದುಕೊಂಡಿತು. ಮ್ಯಾನ್‌ ಆಫ್ ದಿ ಮ್ಯಾಚ್, ಮ್ಯಾನ್‌ ಆಫ್ ದಿ ಸಿರೀಸ್, ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್‌ಮೆನ್ ಪ್ರಶಸ್ತಿಗಳು ಕದಂಬ ಕ್ರಿಕೆಟಸ್ಸ್‌ ತಂಡದ ಏಕೈಕ ಆಟಗಾರ ಜುನೈದ್ ಪಾಲಾದವು.

ಟಗರು - ನಾಟಿಕೋಳಿ ವಿತರಣೆ: ಬೆಂಗಳೂರು ನಗರಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಿತ್ತನಹಳ್ಳಿ ರವಿಕುಮಾರ್, ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದ ತಂಡಕ್ಕೆ ಟಗರು ನೀಡಿದರೆ, ದ್ವಿತೀಯ ತೃತೀಯ ಬಹುಮಾನ ಪಡೆದ ತಂಡಗಳಿಗೆ ನಾಟಿ ಕೊಳಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎನ್.ಗಣೇಶ್, ನಗರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಿತ್ತನಹಳ್ಳಿ ರವಿಕುಮಾರ್, ಲೆಕ್ಕ ಪರಿಶೋಧಕ ವೀರಾಪುರ ಕುಮಾರ್, ಸೊಂಡೆಕೊಪ್ಪ ಆಯೋಜಕ ಎಸ್.ಎನ್.ಶಶಿಧರ್, ಎಚ್.ಎಂ.ಸಂತೋಷ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.


ಪೊಟೊ-2ಕೆಎನ್‌ಎಲ್‌ಎಮ್‌1-ಬೆಂಗಳೂರು ಉತ್ತರ ತಾಲೂಕು ಹುಣ್ಣಿಗೆರೆ ಗ್ರಾಮದ ಮೈದಾನದಲ್ಲಿ ಯುವರತ್ನ ಕ್ರಿಕೆಟರ್ಸ್‌ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೊಂಡೆಕೊಪ್ಪಗ್ರಾಮದ ಕದಂಬ ಕ್ರಿಕೆಟ್‌ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು.