ಕನ್ನಡಪ್ರಭ ವಾರ್ತೆ ಜಗಳೂರು

ಚಿತ್ರದುರ್ಗದ ಶಿವಶರಣ ಮಾದರ ಚನ್ನಯ್ಯ ಗುರುಪೀಠದ ಬಳಿ ಮೇ ೯ರಂದು ನಡೆಯಲಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ''ಅಭಿಮಾನೋತ್ಸವ'' ಕಾರ್ಯಕ್ರಮಕ್ಕೆ ಜಗಳೂರು ಕ್ಷೇತ್ರದಿಂದ ೮ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು.

ತಾಲೂಕಿನ ಗುರುಸಿದ್ದಾಪುರ ಚೌಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಬಿ.ಎಸ್.ವೈ ಜಗಳೂರು ತಾಲೂಕಿನ ೫೭ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ಅವರ ಋಣ ತೀರಿಸಲು ಈ ಅಭಿಮಾನೋತ್ಸವ ಸಾಕ್ಷಿಯಾಗಲಿದೆ ಎಂದರು.

೨೦೨೮ಕ್ಕೆ ಬಿಜೆಪಿ ಅಧಿಕಾರ ಖಚಿತ:

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಜನ ಬೇಸತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಎಸ್ವೈ ನೇತೃತ್ವದಲ್ಲೇ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಜಗಳೂರು ಕ್ಷೇತ್ರದಲ್ಲಿ ಮತ್ತೊಮ್ಮೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಲು ಜನತೆ ನಿರ್ಧರಿಸಿದ್ದಾರೆ ಎಂದು ಎಸ್‌ವಿಆರ್ ವಿಶ್ವಾಸ ವ್ಯಕ್ತಪಡಿಸಿದರು.


ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಸಂಘಟನೆಯೇ ಪಕ್ಷದ ಶಕ್ತಿ ಎಂದರು.

ಬೆಳ್ಳಿ ಪಾದುಕೆ ಅರ್ಪಣೆ:

ಇದೇ ಸಂದರ್ಭದಲ್ಲಿ ಎಸ್‌ವಿಆರ್ ಪತ್ನಿ ಇಂದಿರಾ ರಾಮಚಂದ್ರ ಅವರು ಮಡ್ರಳ್ಳಿ ಚೌಡೇಶ್ವರಿ ದೇವಿಗೆ ಬೆಳ್ಳಿ ಪಾದುಕೆಗಳನ್ನು ಅರ್ಪಿಸಿ ಹರಕೆ ತೀರಿಸಿದರು. ಬಳಿಕ ಭಕ್ತರಿಗೆ ಅನ್ನದಾಸೋಹ ನಡೆಯಿತು.

ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮರುಳಾರಾಧ್ಯ ಅರಸಿಕೆರೆ ಕೆಂಚನಗೌಡ, ಗೋಪಾಲ ರೆಡ್ಡಿ, ಎಚ್.ಸಿ. ಮಹೇಶ್, ಚಟ್ನಹಳ್ಳಿ ರಾಜಣ್ಣ, ಡಿ.ವಿ.ನಾಗಪ್ಪ,ಗಡಿಮಾಕುಂಟೆ ಸಿದ್ದೇಶ್‌, ಎಸ್.ಕೆ.ಮಂಜುನಾಥ್‌,ಪಣಿಯಾಪುರ ಲಿಂಗರಾಜು, ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

- - -

-02ಜೆ.ಜಿ.ಎಲ್.1:

ಜಗಳೂರು ತಾಲೂಕಿನ ಗುರುಸಿದ್ದಾಪುರ ಚೌಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿದರು.