ಯುವಕರು ಮಾದಕ ವಸ್ತುಗಳಿಂದ ದೂರವಿರಿ: ಡಾ. ಬ್ಯಾಕೋಡ

| Published : Jun 27 2025, 12:48 AM IST / Updated: Jun 27 2025, 12:49 AM IST

ಸಾರಾಂಶ

ವಿದ್ಯಾರ್ಥಿಗಳು ದುರ್ಜನರು ಹಾಗೂ ದುಶ್ಚಟಗಳ ಸಹವಾಸದಿಂದ ದೂರವಿರಬೇಕು. ಒಳ್ಳೆಯ ಅಭಿರುಚಿ ಹೊಂದಿರುವ ಸ್ನೇಹಿತರು ಹಾಗೂ ಗುರುಗಳ ಒಡನಾಟ ಇಟ್ಟುಕೊಂಡು ಉತ್ತಮ ಅಭ್ಯಾಸಗಳ ಕಡೆಗೆ ಗಮನ ಕೊಡಬೇಕು. ಮನಸ್ಸನ್ನು ಯಾವಾಗಲು ಶುದ್ಧವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ.

ನವಲಗುಂದ: ವಿದ್ಯಾರ್ಥಿ ಜೀವನ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವ ಮಹತ್ವದ ಘಟ್ಟವಾಗಿದೆ. ಈ ಹಂತದಲ್ಲಿ ಮಾದಕವಸ್ತು ಸೇರಿದಂತೆ ಆರೋಗ್ಯ ಮತ್ತು ಭವಿಷ್ಯಕ್ಕೆ ಮಾರಕವಾಗುವಂತಹ ಯಾವುದೇ ಚಟಗಳ ಆಕರ್ಷಣೆಗೆ ಒಳಗಾಗಬಾರದು ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಸಲಹೆ ನೀಡಿದರು.

ಪಟ್ಟಣದ ಶಂಕರ ಮಹಾವಿದ್ಯಾಲಯದಲ್ಲಿ ಬುಧವಾರ ಜನಸ್ನೇಹಿ ಪೊಲೀಸ್ ಠಾಣೆ ಹಾಗೂ ಶಂಕರ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.

ತೀವ್ರ ಕುತೂಹಲ, ಸ್ನೇಹಿತರ ಒತ್ತಾಯ, ಗೆಳೆಯರ ಗುಂಪಿನಲ್ಲಿ ಒಂದಾಗಬೇಕೆಂಬ ಭಾವನೆ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು, ತಾತ್ಕಾಲಿಕವಾಗಿ ಸಮಸ್ಯೆ ಮರೆಯಲು, ಹೀಗೆ ಅನೇಕ ಕಾರಣಗಳಿಗಾಗಿ ಯುವಕರು ಮಾದಕ ವಸ್ತುಗಳ ಸೇವನೆ ಪ್ರಾರಂಭಿಸುತ್ತಾರೆ. ಮುಂದೆ ಅದು ವ್ಯಸನವಾಗಿ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರು.

ವಿದ್ಯಾರ್ಥಿಗಳು ದುರ್ಜನರು ಹಾಗೂ ದುಶ್ಚಟಗಳ ಸಹವಾಸದಿಂದ ದೂರವಿರಬೇಕು. ಒಳ್ಳೆಯ ಅಭಿರುಚಿ ಹೊಂದಿರುವ ಸ್ನೇಹಿತರು ಹಾಗೂ ಗುರುಗಳ ಒಡನಾಟ ಇಟ್ಟುಕೊಂಡು ಉತ್ತಮ ಅಭ್ಯಾಸಗಳ ಕಡೆಗೆ ಗಮನ ಕೊಡಬೇಕು. ಮನಸ್ಸನ್ನು ಯಾವಾಗಲು ಶುದ್ಧವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಗವಿಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಪ್ರಪಂಚದಲ್ಲೇ ಅತೀ ಹೆಚ್ಚು ಯುವಕರಿರುವ ದೇಶ ಭಾರತ. ಇವರು ದೇಶದ ಹೆಮ್ಮೆಯ ಆಸ್ತಿಯೂ ಹೌದು. ಆದರೆ. ಯುವಕರು ದೇಶಕ್ಕೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು. ದೇಶದಲ್ಲಿ ಇಂತಹ ಜನಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮಗಳು ಅವಶ್ಯವಾಗಿವೆ, ಯುವಕರು ಇಂದು ಮೊಬೈಲ್ ಗೀಳಿನಿಂದ ದಾರಿ ತಪ್ಪುತ್ತಿದ್ದಾರೆ ಆ ಕೆಲಸವಾಗಬಾರದು. ಯುವಕರು ದುಶ್ಚಟಗಳ ದಾಸರಾಗದೇ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದುವುದರೊಂದಿಗೆ ಸದೃಢ ಭಾರತಕ್ಕೆ ಕೈಜೋಡಿಸುವಂತೆ ಸಲಹೆ ನೀಡಿದರು.

ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸರೊಂದಿಗೆ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಿ ಎನ್ನುವ ಘೋಷಣೆಗಳೊಂದಿಗೆ ಜನಜಾಗೃತಿ ಜಾಥಾ ನಡೆಸಿದರು.

ಸಿಪಿಐ ರವಿಕುಮಾರ ಕಪ್ಪತ್ತನವರ, ಮಹಾವಿದ್ಯಾಲಯ ಪ್ರಾಚಾರ್ಯ ಶ್ರೀನಿವಾಸ ಬಡಿಗೇರ, ಜಯರಾಮ ಲಮಾಣಿ, ಆರ್.ಪಿ. ಚವಾಣ, ಪಿಎಸ್ಐ ಜನಾರ್ಧನ ಭಟ್ರಳ್ಳಿ, ದಾವಲಸಾಬ ಮಸೂತಿ ಸೇರಿ ಮಹಾವಿದ್ಯಾಲಯ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.