ಸಾರಾಂಶ
ಮಾಲೂರು ತಾಲೂಕಿನಲ್ಲಿ ನಾನು ಕಾಂಗ್ರೆಸ್ ಕಟ್ಟಿ ಬೆಳೆಸಿದ್ದೇನೆ, ತುಂಬಾ ಕಷ್ಟದಲ್ಲಿ ಎರಡನೇ ಬಾರಿ ಆಯ್ಕೆ ಆಗಿದ್ದೇನೆ ಹಾಗಾಗಿ ಕೋಲಾರ ಜಿಲ್ಲೆಯ ಶಾಸಕರು ಮಂತ್ರಿ ಸ್ಥಾನ ಕೇಳಿದ್ದೇವೆ. ಜಿಲ್ಲೆಯಲ್ಲಿ ಯಾರಿಗೆ ಮಂತ್ರಿ ಸ್ಥಾನ ಕೊಟ್ಟರು ನನಗೆ ಒಪ್ಪಿಗೆ ಇದೆ ಎನ್ನುತ್ತಾರೆ ಶಾಸಕ ನಂಜೇಗೌಡ
ಕೋಲಾರ/ ಮಾಲೂರು : ಮಂತ್ರಿ ಸ್ಥಾನಕ್ಕೆ ನಾನೂ ಅರ್ಹನಿದ್ದೇನೆ, ಮಂತ್ರಿ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ, ಮಂತ್ರಿ ಸ್ಥಾನ ಬೇಕೆಂಬುದು ನಮ್ಮ ಜಿಲ್ಲೆಯ ಜನರ ಒತ್ತಾಯವಾಗಿದೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಮಾಲೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೋಲಾರ ಜಿಲ್ಲೆಗೆ ಈ ಬಾರಿ ಮಂತ್ರಿ ಸ್ಥಾನ ನೀಡಲೇಬೇಕು, ಜಿಲ್ಲೆಯಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರಿದ್ದೇವೆ. ಒಬ್ಬರಿಗಾದರೂ ಮಂತ್ರಿ ಸ್ಥಾನ ನೀಡಬೇಕು. ಮಂತ್ರಿ ಸ್ಥಾನಕ್ಕೆ ತಾವು ಅರ್ಹನಿದ್ದು, ತಮಗೇ ಮಂತ್ರಿ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.ತೀರ್ಮಾನ ಹೈಕಮಾಂಡ್ಗೆ ಬಿಟ್ಟಿದ್ದು
ಜಿಲ್ಲೆಗೆ ಮಂತ್ರಿ ಸ್ಥಾನ ಬೇಕೆಂಬುದು ನಮ್ಮ ಜಿಲ್ಲೆಯ ಜನರ ಒತ್ತಾಯವಾಗಿದೆ. ಅಲ್ಲದೆ ಮಾಲೂರು ತಾಲೂಕಿನಲ್ಲಿ ನಾನು ಕಾಂಗ್ರೆಸ್ ಕಟ್ಟಿ ಬೆಳೆಸಿದ್ದೇನೆ, ತುಂಬಾ ಕಷ್ಟದಲ್ಲಿ ಎರಡನೇ ಬಾರಿ ಆಯ್ಕೆ ಆಗಿದ್ದೇನೆ ಹಾಗಾಗಿ ಕೋಲಾರ ಜಿಲ್ಲೆಯ ಶಾಸಕರು ಮಂತ್ರಿ ಸ್ಥಾನ ಕೇಳಿದ್ದೇವೆ. ಜಿಲ್ಲೆಯಲ್ಲಿ ಯಾರಿಗೆ ಮಂತ್ರಿ ಸ್ಥಾನ ಕೊಟ್ಟರು ನನಗೆ ಒಪ್ಪಿಗೆ ಇದೆ. ಮಂತ್ರಿ ಸ್ಥಾನ ನೀಡುವ ತೀರ್ಮಾನ ಸಿಎಂ ಮತ್ತು ಡಿಸಿಎಂ ಹಾಗು ಹೈ ಕಮಾಂಡ್ಗೇ ಬಿಡುವೆ ಎಂದರು.
ಬಿಜೆಪಿ ಪ್ರಭಾವ ಕುಸಿತ
ರಾಜ್ಯ ಬಿಜೆಪಿಯಲ್ಲಿರುವ ಭಿನ್ನಮತ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿನ ಗುಂಪುಗಾರಿಕೆ ಕೆಟ್ಟದಾಗಿದೆ, ಬೇರೆ ಯಾವ ರಾಜ್ಯದಲ್ಲು ಹೀಗೆ ಗುಂಪುಗಾರಿಕೆ ಇಲ್ಲ, ದೇಶದಲ್ಲಿ ಬಿಜೆಪಿ ಪ್ರಭಾವ ದಿನೇ ದಿನೇ ಕುಸಿಯುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ್ಯರ ವಿರುದ್ದವೇ ಸೀನಿಯರ್ ಎಂಎಲ್ಎಗಳು ಹೋರಾಟ ಮಾಡ್ತಿದ್ದಾರೆ ಎಂದು ಟಾಕಿಸಿದರು.
ಹಾಲಿನ ದರ ಏರಿಕೆ ಸಾಧ್ಯತೆ
ಕೋಚಿಮುಲ್ ಆಧ್ಯಕ್ಷರೂ ಆದ ಶಾಸಕ ನಂಜೇಗೌಡ ರಾಜ್ಯದಲ್ಲಿ ಹಾಲಿನ ದರ ಏರಿಕೆ ವಿಚಾರ ಪ್ರಸ್ತಾಪಿಸಿ, ಸಿಎಂ ಸಿದ್ದರಾಮಯ್ಯ ಆ ಬಗ್ಗೆ ನಿರ್ಧಾರ ತೆಗೆದುಕೊಳ್ತಾರೆ. ರಾಜ್ಯದಲ್ಲಿ ೫ ರೂಪಾಯಿ ದರ ಏರಿಕೆಗೆ ಒತ್ತಾಯ ಇದೆ. ೫ ರು. ದರ ಏರಿಸಿ ಆ ಹಣವನ್ನು ರೈತರಿಗೆ ನೀಡಬೇಕು ಎಂಬ ಒತ್ತಾಯವಿದೆ. ಶೀಘ್ರದಲ್ಲೇ ಹಾಲು ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದರು.