ಸಾರಾಂಶ
ಬೆಂಗಳೂರು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ‘ಸೂರ್ಯ ಬಂಡಲ್ ಬ್ಯಾಂಕ್ - ನೋ ಮನಿ ಬ್ಯಾಕ್’ ಹೆಸರಿನಲ್ಲಿ ಕ್ಷೇತ್ರಾದ್ಯಂತ ಎಟಿಎಂ ಕಾರ್ಡ್ ಹಂಚುವ ಮೂಲಕ ಕಾಂಗ್ರೆಸ್ ವಿನೂತನ ಪ್ರಚಾರ ನಡೆಸಿದೆ.
ಗುರು ರಾಘವೇಂದ್ರ ಬ್ಯಾಂಕ್ ಹಗರಣ ಮುಂದಿಟ್ಟುಕೊಂಡು ತೇಜಸ್ವಿ ಸೂರ್ಯ ಬಾಯಿಯಲ್ಲಿ ಹಣದ ಕಂತೆ ಉಳ್ಳ ಭಾವಚಿತ್ರ ಮುದ್ರಿಸಿ ಎಸ್ಬಿಬಿ ಬ್ಯಾಂಕ್ ಹೆಸರಿನಲ್ಲಿ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಎಸ್ಬಿಬಿ-ಸೂರ್ಯ ಬಂಡಲ್ ಬ್ಯಾಂಕ್ ಮೂಲಕ ಹಲವು ಆಫರ್ ನೀಡಲಾಗುತ್ತಿದೆ. ನೀವು ಖಾತೆಯಲ್ಲಿ ಹಣ ಇಟ್ಟರೆ ಮೂರು ನಾಮಕ ಹಾಕುತ್ತೇವೆ. ಶೇ.100ರಷ್ಟು ನೋ ಮನಿ ಬ್ಯಾಕ್ ಎಂದು ಕಾಂಗ್ರೆಸ್ ಕಾರ್ಯಕರ್ತರು ಎಟಿಎಂ ಕಾರ್ಡ್ ಹಂಚುತ್ತಿದ್ದಾರೆ. ತನ್ಮೂಲಕ ಗುರು ರಾಘವೇಂದ್ರ ಬ್ಯಾಂಕ್ ಹಗರಣವನ್ನು ಚುನಾವಣಾ ವಿಷಯವನ್ನಾಗಿ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೋಟೆಲ್, ಅಂಗಡಿಗಳಿಗೆ ಎಟಿಎಂ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ತನ್ಮೂಲಕ ವಿನೂತನ ಪ್ರಚಾರಕ್ಕೆ ಕಾಂಗ್ರೆಸ್ ಪಡೆ ಕೈ ಹಾಕಿದೆ. ಜತೆಗೆ ಕಾಂಗ್ರೆಸ್ನ ಯಾವುದೇ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲೂ ಈ ವಿಡಿಯೋ ಹಾಗೂ ಫೋಟೋಗಳನ್ನು ಪ್ರಕಟಿಸದೆ ಎಚ್ಚರಿಕೆ ವಹಿಸಿದೆ.