ಸಿ.ಟಿ.ರವಿ, ಯತೀಂದ್ರ ಸೇರಿ 17 ಎಂಎಲ್‌ಸಿಗಳ ಪ್ರಮಾಣ ಇಂದು

| Published : Jun 24 2024, 09:58 AM IST

Yathindra, CT Ravi
ಸಿ.ಟಿ.ರವಿ, ಯತೀಂದ್ರ ಸೇರಿ 17 ಎಂಎಲ್‌ಸಿಗಳ ಪ್ರಮಾಣ ಇಂದು
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭೆ, ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರಗಳಿಂದ ರಾಜ್ಯ ವಿಧಾನ ಪರಿಷತ್‌ಗೆ ನೂತನವಾಗಿ ಚುನಾಯಿತರಾಗಿರುವ ಒಟ್ಟು 17 ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬೆಂಗಳೂರು : ವಿಧಾನಸಭೆ, ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರಗಳಿಂದ ರಾಜ್ಯ ವಿಧಾನ ಪರಿಷತ್‌ಗೆ ನೂತನವಾಗಿ ಚುನಾಯಿತರಾಗಿರುವ ಒಟ್ಟು 17 ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಪರಿಷತ್‌ನ ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ ಎಂದು ಪರಿಷತ್ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಏಳು ಅಭ್ಯರ್ಥಿಗಳಾಗಿದ್ದ ಸಚಿವ ಬೋಸರಾಜು, ಯತೀಂದ್ರ ಸಿದ್ದರಾಮಯ್ಯ, ಕೆ.ಗೋವಿಂದರಾಜು, ವಸಂತಕುಮಾರ್‌, ಐವಾನ್‌ ಡಿಸೋಜ, ಬಲ್ಕೀಸ್‌ ಬಾನು, ಜಗದೇವ್‌ ಗುತ್ತೇದಾರ್‌, ಬಿಜೆಪಿಯ ಮೂವರು ಅಭ್ಯರ್ಥಿಗಳಾಗಿದ್ದ ಸಿ.ಟಿ.ರವಿ, ಎನ್‌.ರವಿಕುಮಾರ್‌, ಎಂ.ಜಿ.ಮೂಳೆ ಹಾಗೂ ಜೆಡಿಎಸ್‌ನ ಅಭ್ಯರ್ಥಿ ಜವರಾಯಿಗೌಡ ಅವಿರೋಧವಾಗಿ ಆಯ್ಕೆಯಾಗಿದ್ದರು.

ಅದೇ ರೀತಿ ಪರಿಷತ್‌ನ ಮೂರು ಶಿಕ್ಷಕರ ಕ್ಷೇತ್ರ ಮತ್ತು ಮೂರು ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ದಕ್ಷಿಣ, ನೈಋತ್ಯ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರಗಳಿಂದ ಕ್ರಮವಾಗಿ ಜೆಡಿಎಸ್‌ನ ಕೆ.ವಿವೇಕಾನಂದ, ಎಸ್‌.ಎಲ್‌.ಭೋಜೇಗೌಡ, ಕಾಂಗ್ರೆಸ್‌ನ ಟಿ.ಡಿ.ಶ್ರೀನಿವಾಸ್‌ ಜಯಗಳಿಸಿದ್ದರು. ಆದೇ ರೀತಿ ನೈರುತ್ಯ, ಈಶಾನ್ಯ ಮತ್ತು ಬೆಂಗಳೂರು ಪದವೀಧರ ಕ್ಷೇತ್ರಗಳಿಂದ ಕ್ರಮವಾಗಿ ಕಾಂಗ್ರೆಸ್‌ನ ಬಿಜೆಪಿಯ ಡಾ.ಧನಂಜಯ ಸರ್ಜಿ, ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ್‌ ಮತ್ತು ರಾಮೋಜಿಗೌಡ ಜಯಗಳಿಸಿದ್ದರು. ಅವರೆಲ್ಲರೂ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.