ಮಾಜಿ ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸೇರಿ 54 ಸದಸ್ಯರು ರಾಜ್ಯಸಭೆಯಿಂದ ನಿವೃತ್ತರಾದರು.

ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸೇರಿ 54 ಸದಸ್ಯರು ರಾಜ್ಯಸಭೆಯಿಂದ ನಿವೃತ್ತರಾದರು. ಈ ಪೈಕಿ ಕೆಲವರ ಅವಧಿ ಮಂಗಳವಾರ ಮತ್ತೆ ಕೆಲವರ ಅವಧಿ ಬುಧವಾರಕ್ಕೆ ಮುಕ್ತಾಯಗೊಂಡಿದೆ. 

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ಧರ್ಮೇಂದ್ರ ಪ್ರಧಾನ್‌, ಮನಸುಖ್‌ ಮಾಂಡವೀಯ, ಪುರುಷೋತ್ತಮ ರೂಪಾಲ, ವಿ.ಮುರಳೀಧರನ್, ಭೂಪೇಂದ್ರ ಯಾದವ್‌ ನಾರಾಯಣ ರಾಣೆ ಹಾಗೂ ಎಲ್‌.ಮುರುಗನ್‌ ನಿವೃತ್ತರಾದ 9 ಸಚಿವರಾಗಿದ್ದಾರೆ. 

ಈ ಪೈಕಿ ಅಶ್ವಿನಿ ವೈಷ್ಣವ್‌ ಮತ್ತು ಮುರುಗನ್ ಹೊರತಾಗಿ ಮಿಕ್ಕೆಲ್ಲ ಸಚಿವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಉಳಿದಂತೆ ಮಾಜಿ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ಸಮಾಜವಾದಿ ಪಕ್ಷದ ಜಯಾ ಬಚ್ಚನ್‌, ಆರ್‌ಜೆಡಿ ಪಕ್ಷದ ಮನೋಜ್‌ ಕುಮಾರ್‌ ಝಾ, ಕಾಂಗ್ರೆಸ್‌ನ ನಾಸಿರ್‌ ಹುಸೇನ್‌, ಅಭಿಷೇಕ್‌ ಸಿಂಘ್ವಿ ನಿವೃತ್ತರಾದರು. ಈ ಪೈಕಿಯೂ ಕೆಲವರು ಮರಳಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.