ಸಾರಾಂಶ
ನವದೆಹಲಿ: ಚುನಾವಣೆಗೂ ಮುನ್ನ ಬಿಜೆಡಿ ಬಿಟ್ಟು ಬಿಜೆಪಿ ಸೇರಿ ಲೋಕಸಭೆಗೆ ಒಡಿಶಾದಿಂದ ಆಯ್ಕೆ ಆಗಿದ್ದ ಭ್ರಾತೃಹರಿ ಮಹ್ತಬ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದಾರೆ.
ಮುಂದಿನ ಸ್ಪೀಕರ್ ಆಯ್ಕೆಯವರೆಗೂ ಮಹ್ತಬ್ ಅವರು ಸ್ಪೀಕರ್ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ. ಅಂದರೆ ಜೂನ್ ಕೊನೆಯ ವಾರ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ನೂತನ ಸಂಸದರಿಗೆ ಇವರು ಪ್ರಮಾಣವಚನ ಬೋಧಿಸಲಿದ್ದಾರೆ. ಇದಕ್ಕೂ ಮುನ್ನ ಹಂಗಾಮಿ ಸ್ಪೀಕರ್ ಹುದ್ದೆಗೆ ಕೇರಳದ ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರ ಹೆಸರು ಕೇಳಿಬಂದಿತ್ತು.
ಅನಗತ್ಯ ಕರೆ ನಿಯಂತ್ರಣಕ್ಕೆ ಕರಡು ಮಾರ್ಗಸೂಚಿ ಪ್ರಕಟ
ನವದೆಹಲಿ: ಗ್ರಾಹಕ ವ್ಯವಹಾರಗಳ ಸಚಿವಾಲಯವು ಅನಪೇಕ್ಷಿತ ವ್ಯಾಪಾರ ಸಂದೇಶ ಮತ್ತು ಕರೆಗಳನ್ನು ತಡೆಯುವ ನಿಟ್ಟಿನಲ್ಲಿ ಕರಡು ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಕೇಳಿದೆ.
ಸಾರ್ವಜನಿಕರು ತಮ್ಮ ಅಭಿಪ್ರಾಯ ಸಲ್ಲಿಸಲು ಜುಲೈ 21ರವರೆಗೆ ಸಮಯ ನೀಡಿದೆ. ಗ್ರಾಹಕರ ಒಪ್ಪಿಗೆ ಇಲ್ಲದೇ ಬರುವ ಕರೆಗಳನ್ನು ಹಾಗೂ ಸಂದೇಶಗಳನ್ನು ಅನಪೇಕ್ಷಿತ ಕರೆಗಳು ಎಂದು ಪರಿಗಣಿಸಲಾಗಿದೆ. ಇವುಗಳನ್ನು ನಿರ್ಬಂಧಿಸುವ ಸಂಬಂಧ ಅಭಿಪ್ರಾಯ ಕೋರಲಾಗಿದೆ. ಈ ಕರಡು ಮಾರ್ಗಸೂಚಿಯನ್ನು ಸಚಿವಾಲಯ ಟೆಲಿಕಾಂ ಸಂಸ್ಥೆಗಳು ಮತ್ತು ನಿಯಂತ್ರಕಾರರ ಜೊತೆ ಸೇರಿ ಸಿದ್ಧಪಡಿಸಿದೆ.