ಆಗ್ರಾ: ರಜೌರಿಯಲ್ಲಿ ಸಾವನ್ನಪ್ಪಿದ ಸೇನಾ ಕ್ಯಾಪ್ಟನ್‌ ಶುಭಂ ಗುಪ್ತಾ ಅವರ ತಾಯಿ ದುಃಖತಪ್ತಳಾಗಿ ಅಳುತ್ತಿದ್ದರೂ, ಉತ್ತರ ಪ್ರದೇಶದ ಸಚಿವ ಯೋಗೇಂದ್ರ ಉಪಾಧ್ಯಾಯ ಅವರು, ಆಕೆಗೆ ಪರಿಹಾರದ ಚೆಕ್‌ ನೀಡಿ ಬಲವಂತವಾಗಿ ಫೋಟೋ ತೆಗೆಸಿಕೊಂಡಿದ್ದಾರೆ, ಇದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಸಚಿವ ಯೋಗೇಂದ್ರ ಉಪಾಧ್ಯಾಯ ಮತ್ತು ಶಾಸಕ ಜಿ.ಎಸ್‌ ಧರ್ಮೇಶ್‌ ಅವರು ಶುಭಂ ಗುಪ್ತಾ ಮನೆಗೆ ಭೇಟಿ ನೀಡಿದಾಗ ತಾಯಿ ರೋದಿಸುತ್ತಿದ್ದರು. ಈ ವೇಳೆ ಸರ್ಕಾರದ ಪರಿಹಾರ ತಮಗೆ ಬೇಡ ಎಂದೂ ಹೇಳಿದರು. ಆದರೂ ಸಚಿವರು ಬಲವಂತವಾಗಿ ಪರಿಹಾರದ ಚೆಕ್‌ ವಿತರಿಸಿ ಅದರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಇದನ್ನು ವ್ಯಾಪಕವಾಗಿ ಟೀಕಿಸಿರುವ ಕಾಂಗ್ರೆಸ್‌ ಹಾಗೂ ಆಪ್‌ ಪಕ್ಷಗಳು, ಬಿಜೆಪಿಯ ಈ ನಡೆ ರಣಹದ್ದುಗಳಿಗೆ ಸಮಾನ ಮತ್ತು ಬಿಜೆಪಿಯೆಂದರೆ ಬೇಷರಮ್‌ (ಅಸಹ್ಯರವಾದ) ಪ್ರಚಾರಕ ಪಕ್ಷ ಎಂದು ಜರಿದಿದೆ.