ಸಾರಾಂಶ
‘ಬಿಜೆಪಿಯಲ್ಲಿ ನನ್ನ ನಾಯಕತ್ವಕ್ಕೆ ವಿರೋಧ ಇರುವುದು ನಿಜ. ನನ್ನ ಜತೆ ಹಿರಿಯರಿಗೆ ಹೊಂದಾಣಿಕೆ ಆಗಲು ಸಮಯ ಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒಪ್ಪಿಕೊಂಡಿದ್ದಾರೆ.
ನವದೆಹಲಿ : ‘ಬಿಜೆಪಿಯಲ್ಲಿ ನನ್ನ ನಾಯಕತ್ವಕ್ಕೆ ವಿರೋಧ ಇರುವುದು ನಿಜ. ನನ್ನ ಜತೆ ಹಿರಿಯರಿಗೆ ಹೊಂದಾಣಿಕೆ ಆಗಲು ಸಮಯ ಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒಪ್ಪಿಕೊಂಡಿದ್ದಾರೆ.
ದಿಲ್ಲಿಯಲ್ಲಿ ಶುಕ್ರವಾರ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ನನ್ನ ನಾಯಕತ್ವಕ್ಕೆ ಪಕ್ಷದಲ್ಲಿ ಒಂದಷ್ಟು ವಿರೋಧ ಇರುವುದು ನಿಜ. ಪಕ್ಷದ ಕೆಲವು ಹಿರಿಯ ನಾಯಕರಿಗೆ ನನ್ನ ನಾಯಕತ್ವ ಒಪ್ಪಿಕೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲಾ ಬಣಗಳನ್ನೂ ಒಂದುಗೂಡಿಸಿ ಹೋಗುವ ವಿಶ್ವಾಸ ನನಗಿದೆ’ ಎಂದರು.
ಇದೇ ವೇಳೆ, ‘ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾಂವಿ ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಗೆಲುವು ಖಚಿತ. ಹೈದರಾಬಾದ್ ಕರ್ನಾಟಕ ಮತ್ತು ಹಳೆಯ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಬಲಪಡಿಸಲು ನಾವು ಹೆಚ್ಚಿನ ಒತ್ತು ನೀಡಿದ್ದೇವೆ. ಈ ಕ್ರಮಗಳ ಮೂಲಕ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆದ್ದು ಅಧಿಕಾರಕ್ಕೆ ಮರಳುವ ವಿಶ್ವಾಸವಿದೆ’ ಎಂದರು.