ಭ್ರಷ್ಟರು ಮತ್ತು ಹಿಂಸಾಕೋರರು ರಾಜ್ಯದಲ್ಲಿ ಮುಕ್ತವಾಗಿ ಇರಲು ಟಿಎಂಸಿ ಬಯಸುತ್ತದೆ. ಹೀಗಾಗಿಯೇ ಇಂಥ ಪ್ರಕರಣಗಳ ತನಿಖೆ ನಡೆಸುವ ಕೇಂದ್ರೀಯ ತನಿಖಾ ಸಂಸ್ಥೆಗಳ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಜಲ್ಪೈಗುರಿ: ಭ್ರಷ್ಟರು ಮತ್ತು ಹಿಂಸಾಕೋರರು ರಾಜ್ಯದಲ್ಲಿ ಮುಕ್ತವಾಗಿ ಇರಲು ಟಿಎಂಸಿ ಬಯಸುತ್ತದೆ. ಹೀಗಾಗಿಯೇ ಇಂಥ ಪ್ರಕರಣಗಳ ತನಿಖೆ ನಡೆಸುವ ಕೇಂದ್ರೀಯ ತನಿಖಾ ಸಂಸ್ಥೆಗಳ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಕಳೆದ ಜನವರಿ ತಿಂಗಳಲ್ಲಿ ಸಂದೇಶ್ಖಾಲಿಯಲ್ಲಿ ಇ.ಡಿ. ಅಧಿಕಾರಿಗಳ ಮೇಲೆ ಮತ್ತು ಶನಿವಾರ ಮೇದಿನಿಪುರದಲ್ಲಿ ಎನ್ಐಎ ಅಧಿಕಾರಿಗಳ ಮೇಲೆ ಟಿಎಂಸಿ ನಾಯಕರಿಂದ ದಾಳಿ ನಡೆದ ಬೆನ್ನಲ್ಲೇ ಮೋದಿ ಈ ಆರೋಪ ಮಾಡಿದ್ದಾರೆ.ಭಾನುವಾರ ಇಲ್ಲಿ ನಡೆದ ಬಿಜೆಪಿಯ ಬೃಹತ್ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಮೋದಿ, ‘ಟಿಎಂಸಿ ಕಾನೂನು ಮತ್ತು ದೇಶದ ಸಂವಿಧಾನಕ್ಕೆ ಅಗೌರವ ತೋರುತ್ತಿದೆ. ಪಶ್ಚಿಮ ಬಂಗಾಳದಲ್ಲೀಗ ಟಿಎಂಸಿಯ ಸಿಂಡಿಕೇಟ್ ರಾಜ್ ನಡೆಯುತ್ತಿದೆ. ಹೀಗಾಗಿ ಹಲವು ಸಂದರ್ಭದಲ್ಲಿ ನ್ಯಾಯಾಲಯಗಳೇ ಮಧ್ಯಪ್ರವೇಶ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಮೋದಿ ಕುಟುಕಿದರು.
ಇದೇ ವೇಳೆ ಇತ್ತೀಚೆಗೆ ಸಂದೇಶ್ಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಪ್ರಸ್ತಾಪಿಸಿದ ಮೋದಿ, ‘ಈ ಪ್ರಕರಣದಲ್ಲಿ ಭಾಗಿಯಾದವರು ತಮ್ಮ ಉಳಿದ ಜೀವನವನ್ನು ಜೈಲಿನಲ್ಲೇ ಕಳೆಯುವಂತೆ ಮಾಡುತ್ತೇವೆ’ ಎಂದು ನೊಂದವರಿಗೆ ಅಭಯ ನೀಡಿದರು.