ಎಚ್‌ಡಿಕೆ ವರ್ಸಸ್‌ ರಾಜ್ಯ ಸರ್ಕಾರ ಗಣಿಗಾರಿಕೆ ಸಂಘರ್ಷ?

| Published : Jun 23 2024, 02:04 AM IST / Updated: Jun 23 2024, 04:34 AM IST

ಸಾರಾಂಶ

 ಸಂಡೂರು ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಯೋಜನೆ ವಿಚಾರವೀಗ ರಾಜ್ಯ ಸರ್ಕಾರ ಹಾಗೂ ಕೇಂದ್ರ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದು, ಕುಮಾರಸ್ವಾಮಿ ಸಚಿವರಾದ ನಂತರ ಗಣಿಗಾರಿಕೆಗೆ ನೀಡಿದ್ದ ಅನುಮೋದನೆಗೆ ರಾಜ್ಯ ಸರ್ಕಾರ ತಡೆಯೊಡ್ಡಿದೆ.

 ಬೆಂಗಳೂರು ;  ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಯೋಜನೆ ವಿಚಾರವೀಗ ರಾಜ್ಯ ಸರ್ಕಾರ ಹಾಗೂ ಕೇಂದ್ರ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದು, ಕುಮಾರಸ್ವಾಮಿ ಸಚಿವರಾದ ನಂತರ ಗಣಿಗಾರಿಕೆಗೆ ನೀಡಿದ್ದ ಅನುಮೋದನೆಗೆ ರಾಜ್ಯ ಸರ್ಕಾರ ತಡೆಯೊಡ್ಡಿದೆ.

ಕೇಂದ್ರ ಉಕ್ಕು ಸಚಿವರಾಗಿ ಅಧಿಕಾರ ಸ್ವೀಕಾರದ ನಂತರ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್‌) ಅಧಿಕಾರಿಗಳೊಂದಿಗೆ ಸಭೆ ನಡೆಸಿ ದೇವದಾರಿ ಅರಣ್ಯ ಪ್ರದೇಶದ 401.57 ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ನಡೆಸುವುದಕ್ಕೆ ಕುಮಾರಸ್ವಾಮಿ ಅನುಮೋದನೆ ನೀಡಿದ್ದರು. ಆದರೆ, ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಮೊದಲು ಸಹಿ ಹಾಕಿದ್ದ ಕಡತದ ಯೋಜನೆಗೆ ರಾಜ್ಯ ಅರಣ್ಯ ಇಲಾಖೆ ತಡೆಯೊಡ್ಡಿದೆ.

ರಾಜ್ಯ ಸರ್ಕಾರದ ತಡೆಗೆ ಕಾರಣ:

ಕೆಐಒಸಿಎಲ್‌ ಈ ಹಿಂದೆ ಕುದುರೆಮುಖ ರಾಷ್ಟ್ರೀಯ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದ ಸಂದರ್ಭದಲ್ಲಿ ಹಲವು ಲೋಪಗಳನ್ನು ಎಸಗಿದೆ. ಅಲ್ಲದೆ, ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದೆ. ಈ ಕಾರಣಕ್ಕಾಗಿ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ನಿಗದಿತ ಕಾಲಮಿತಿಯೊಳಗೆ ಅರಣ್ಯ ಅಭಿವೃದ್ಧಿ ಸೇರಿದಂತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳುವಂತೆ ಕೆಐಒಸಿಎಲ್‌ಗೆ ನಿರ್ದೇಶಿಸಿತ್ತು. ಆದರೆ, ಕೆಐಒಸಿಎಲ್‌ ಆ ನಿರ್ದೇಶನಗಳನ್ನು ಜಾರಿ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ಸಿಇಸಿ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವವರಿಗೆ ದೇವದಾರಿ ಬೆಟ್ಟ ಪ್ರದೇಶದಲ್ಲಿ ಗಣಿಗಾರಿಕೆಗಾಗಿ ನೀಡಲಿರುವ ಅರಣ್ಯ ಭೂಮಿಯನ್ನು ಕೆಐಒಸಿಎಲ್‌ಗೆ ಹಸ್ತಾಂತರಿಸಬಾರದು ಹಾಗೂ ಅರಣ್ಯ ತೀರುವಳಿ ಗುತ್ತಿಗೆ ಪತ್ರಕ್ಕೆ ಅಧಿಕಾರಿಗಳು ಸಹಿ ಹಾಕದಿರುವಂತೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ನಿರ್ದೇಶಿಸಿದ್ದಾರೆ.

ಎಚ್‌ಡಿಕೆ ಅನುಮತಿಸಿದ ಮೊದಲ ಯೋಜನೆ:

ಉಕ್ಕು ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಕೆಐಒಸಿಎಲ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಎಚ್‌.ಡಿ.ಕುಮಾರಸ್ವಾಮಿ, ದೇವದಾರಿ ಪ್ರದೇಶದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಕುರಿತು ವಿಸ್ತೃತ ಚರ್ಚೆ ನಡೆಸಿದ್ದರು. ರಾಜ್ಯ ಸರ್ಕಾರ ಅರಣ್ಯ ಪ್ರದೇಶ ಹಸ್ತಾಂತರಕ್ಕೆ ಅನುಮತಿಸಿರುವ ಕಾರಣ ಗಣಿಗಾರಿಕೆ ಆರಂಭಿಸುವಂತೆ ಸೂಚಿಸಿದ್ದರು. ಜತೆಗೆ ಅದಕ್ಕೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಿದ್ದರು. ಅವರು ಉಕ್ಕು ಸಚಿವರಾದ ನಂತರ ಅನುಮತಿಸಿದ ಮೊದಲ ಯೋಜನೆ ಇದಾಗಿತ್ತು.

ಪರಿಸರವಾದಿಗಳಿಂದ ವಿರೋಧ:

ಎಚ್‌.ಡಿ.ಕುಮಾರಸ್ವಾಮಿ ನಿರ್ಧಾರಕ್ಕೆ ಪರಿಸರವಾದಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ, ಅದಕ್ಕೆ ಸಮಜಾಯಿಷಿ ನೀಡಿದ್ದ ಎಚ್‌.ಡಿ.ಕುಮಾರಸ್ವಾಮಿ ಒಮ್ಮೆಲೇ ಎಲ್ಲ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಆರಂಭವಾಗುವುದಿಲ್ಲ. ಬದಲಿಗೆ ಅದಿರಿನ ಪ್ರಮಾಣ ನೋಡಿಕೊಂಡು ಗಣಿಗಾರಿಕೆ ಮಾಡಲಾಗುವುದು ಹಾಗೂ ಅರಣ್ಯ ನಾಶದ ಬದಲಾಗಿ ಬೇರೆ ಪ್ರದೇಶದಲ್ಲಿ ಅರಣ್ಯ ಬೆಳೆಸಲಾಗುವುದು ಎಂದು ಹೇಳಿದ್ದರು.