ಸಾರಾಂಶ
ಸಿದ್ದರಾಮಯ್ಯ ಅವರು ಆಯೋಜಿಸಿದ್ದ ಸಮಾವೇಶ ಸರ್ಕಾರಿ ಕಾರ್ಯಕ್ರಮವಲ್ಲ. ಅದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಪಮಾನ ಮಾಡಲು ನಡೆಸಿದ ಕಾರ್ಯಕ್ರಮವಾಗಿತ್ತು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಬೆಂಗಳೂರು : ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯೋಜಿಸಿದ್ದ ಸಮಾವೇಶ ಸರ್ಕಾರಿ ಕಾರ್ಯಕ್ರಮವಲ್ಲ. ಅದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಪಮಾನ ಮಾಡಲು ನಡೆಸಿದ ಕಾರ್ಯಕ್ರಮವಾಗಿತ್ತು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ನಡೆಸಿದ ಸಮಾವೇಶ ಕಾಂಗ್ರೆಸ್ನ ಒಡಕನ್ನು ತೋರಿಸಿದೆ. ಅಲ್ಲಿ ಒಬ್ಬರೂ ಶಿವಕುಮಾರ್ ಪರ ಮಾತನಾಡಲಿಲ್ಲ. ಶಿವಕುಮಾರ್ಗೆ ಪಾಠ ಕಲಿಸಲು ಹಾಗೂ ಅಪಮಾನ ಮಾಡಲು ಈ ಸಮಾವೇಶ ನಡೆಸಲಾಗಿದೆ. ಶಿವಕುಮಾರ್ ಈಗ 2ನೇ ದರ್ಜೆಯ ನಾಯಕರಾಗಿದ್ದು, ಅವರನ್ನು ಮುಗಿಸಲು ಗುದ್ದಲಿ ಪೂಜೆ ಮಾಡಲಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರು ಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಇದು ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಆಂತರಿಕ ಜಗಳ. ಬಿಜೆಪಿಗೆ ಸರ್ಕಾರವನ್ನು ಉರುಳಿಸುವ ಅಗತ್ಯವಿಲ್ಲ. ಕಾಂಗ್ರೆಸ್ನ ಆಂತರಿಕ ಕಲಹದಿಂದಲೇ ಈ ಸರ್ಕಾರ ಬಿದ್ದು ಹೋಗಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಶಾಸಕರ ಅಹವಾಲುಗಳನ್ನು ಆಲಿಸಿದ್ದು, ಇವರ ಜಗಳ ಜನರ ಮುಂದೆ ಬಯಲಾಗಿದೆ ಎಂದು ಖಂಡಿಸಿದರು.
ಖರ್ಗೆಯಿಂದ ಕೀಳು ಮಾತು:
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೈಸೂರಿನ ಸಮಾವೇಶದಲ್ಲಿ ಕೀಳಾಗಿ ಮಾತನಾಡಿದ್ದಾರೆ. ಪ್ರಧಾನಿ ಬೊಗಳುತ್ತಾರೆಂದು ಹೇಳುವುದು ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ತೋರಿಸುತ್ತದೆ. ಈ ಹಿಂದೆ ಛಲವಾದಿ ನಾರಾಯಣಸ್ವಾಮಿ ಗಾದೆ ಮಾತು ಹೇಳಿದಾಗ ಸಂಸ್ಕೃತಿ ಬಗ್ಗೆ ಇವರೇ ಮಾತಾಡಿದ್ದರು. ಇನ್ನು ಅಧಿಕಾರಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ನವರು ಈ ರೀತಿ ಕೀಳಾಗಿ ಮಾತಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ವಿಭಜನೆಯಿಂದ ತಾರತಮ್ಯ
ಬೆಂಗಳೂರನ್ನು ಅಭಿವೃದ್ಧಿ ಮಾಡದೆ ವಿಭಜಿಸಲಾಗಿದೆ. ಇದರಿಂದ ಆದಾಯ ಹಂಚಿಕೆಯಲ್ಲಿ ತಾರತಮ್ಯ ಉಂಟಾಗಿ ಇನ್ನಷ್ಟು ಕಲಹ ಉಂಟಾಗಲಿದೆ ಎಂದು ಅಶೋಕ್ ಎಚ್ಚರಿಸಿದರು. ಸಂಚಾರ ದಟ್ಟಣೆ, ಪ್ರವಾಹ, ಕಸದ ಸಮಸ್ಯೆ ಸೇರಿದಂತೆ ಯಾವ ಸಮಸ್ಯೆಯೂ ಇದರಿಂದ ನಿವಾರಣೆ ಆಗುವುದಿಲ್ಲ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ವಿಭಜಿಸಿದರೆ ಪ್ರಗತಿ ಆಗುವುದಿಲ್ಲ. ಬೆಂಗಳೂರು ಕೇಂದ್ರದಲ್ಲಿ ಎಲ್ಲೂ ಕಸದ ಘಟಕ ಇಲ್ಲ. ಈ ಕಸವನ್ನು ಹೊರವಲಯಕ್ಕೆ ಸಾಗಿಸಿದರೆ, ಸ್ವೀಕಾರ ಮಾಡುವುದಿಲ್ಲ ಎಂದು ಅಲ್ಲಿನ ಜನರು ಹೇಳಬಹುದು. ಇದರಿಂದ ಇನ್ನಷ್ಟು ವಾಗ್ವಾದ ಉಂಟಾಗಲಿದೆ. ಸುರಂಗ ರಸ್ತೆ ಮಾಡಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲು ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಿದರು.
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸುರಂಗ ರಸ್ತೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಇದರ ಬದಲು ಮೆಟ್ರೋ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿದರೆ, ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.