ವಿದ್ಯಾರ್ಥಿನಿಯರಿಗೆ ಸ್ಕೂಟರ್‌, ಎಸ್ಸಿಎಸ್ಟಿಗೆ ₹12 ಲಕ್ಷ

| Published : Oct 19 2023, 12:46 AM IST

ಸಾರಾಂಶ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಜಯಗಳಿಸಿದರೆ 18 ವರ್ಷ ತುಂಬಿದ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌, ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಕ್ಕೆ 12 ಲಕ್ಷ ರು. ಆರ್ಥಿಕ ನೆರವು ನೀಡುವುದಾಗಿ ಕಾಂಗ್ರೆಸ್‌ ಬುಧವಾರ ಘೋಷಿಸಿದೆ.
- ತೆಲಂಗಾಣ ವಿಧಾನಸಭೆಗೆ ಮತ್ತಷ್ಟು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌ ಹೈದರಾಬಾದ್‌: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಜಯಗಳಿಸಿದರೆ 18 ವರ್ಷ ತುಂಬಿದ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌, ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಕ್ಕೆ 12 ಲಕ್ಷ ರು. ಆರ್ಥಿಕ ನೆರವು ನೀಡುವುದಾಗಿ ಕಾಂಗ್ರೆಸ್‌ ಬುಧವಾರ ಘೋಷಿಸಿದೆ. ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಗೆ ಪ್ರಚಾರ ಆರಂಭಿಸಿರುವ ಕಾಂಗ್ರೆಸ್‌ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ‘ಅಂಬೇಡ್ಕರ್‌ ಅಭಯ ಹಸ್ತ ಯೋಜನೆಯಡಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ 12 ಲಕ್ಷ ರು.ವರೆಗೆ ಆರ್ಥಿಕ ಸಹಾಯ ನೀಡುವುದರೊಂದಿಗೆ ಎಸ್‌ಸಿ ಸಮುದಾಯಕ್ಕೆ ನೀಡಲಾಗುತ್ತಿರುವ ಮೀಸಲಾತಿಯನ್ನು ಶೇ.18ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ಪ್ರತಿಯೊಂದು ಅಡವಿ ಗ್ರಾಮ ಪಂಚಾಯತ್‌ಗಳಿಗೆ 25 ಲಕ್ಷ ರು. ಆರ್ಥಿಕ ನೆರವು, 1 ವರ್ಷದಲ್ಲಿ 2 ಲಕ್ಷ ನೇಮಕಾತಿ, ನಿರುದ್ಯೋಗಿಗಳಿಗೆ 4 ಸಾವಿರ ರು. ಮಾಸಿಕ ಭತ್ಯೆ, ಹುತಾತ್ಮರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ, ಗಲ್ಫ್‌ ದೇಶಗಳಲ್ಲಿ ಯುವಕರಿಗೆ ಕೆಲಸ ದೊರಕಿಸುವುದಕ್ಕಾಗಿ ಗಲ್ಫ್‌ ಸೆಂಟರ್‌ ಸ್ಥಾಪನೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಇದಕ್ಕೂ ಮೊದಲು 500 ರು.ಗೆ ಗ್ಯಾಸ್‌ ಸಿಲಿಂಡರ್‌, ರೈತರ 2 ಲಕ್ಷ ರು. ಸಾಲ ಮನ್ನಾ, ಮಹಿಳೆಯರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ರು. ನೆರವು, ವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಮಾಸಿಕ 4 ಸಾವಿರ ರು. ನೆರವು ಮತ್ತು ರೈತರಿಗೆ ವಾರ್ಷಿಕ 15 ಸಾವಿರ ರು. ಆರ್ಥಿಕ ನೆರವು ನೀಡುವ ಭರವಸೆಯನ್ನು ಕಾಂಗ್ರೆಸ್‌ ನೀಡಿತ್ತು.